ಭುವನೇಶ್ವರ : ಕೊರೊನಾ ವೈರಸ್ ತಡೆಗೆ ಎಲ್ಲಾ ದೇಶಗಳ ವೈದ್ಯರು ಹಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇದರ ಮಧ್ಯೆ ಒಡಿಶಾದಲ್ಲಿ ಆಘಾತಕಾರಿ ಘಟನೆವೊಂದು ನಡೆದಿದ್ದು, ಅರ್ಚಕನೋರ್ವ ಕೊರೊನಾ ತೊಲಗಿಸಲು ನರ ಬಲಿ ನೀಡಿದ್ದಾನೆ. ಬುಧವಾರ ರಾತ್ರಿ ಘಟನೆ ನಡೆದಿದ್ದು, ಒಡಿಶಾದ ಕಟಕ್ ಜಿಲ್ಲೆಯ ಬಂಧಾಹೂಡಾದ ಬಳಿಯ ಬಂಧಾ ಮಾ ಬುಧ ಬ್ರಾಹ್ಮಿಣಿ ದೇವಸ್ಥಾನದ ಹಿರಿಯ ಅರ್ಚಕ ಸನ್ಸಾರಿ ಓಝಾ ಈ ಕೃತ್ಯ ಎಸಗಿದ್ದಾನೆ. ಈತ ದೇವಿಗೆ ಕೊರೊನಾ ವೈರಸ್ ಅವನ್ನು ತೊಲಗಿಸುವಂತೆ ಸರೋಜ್ ಕುಮಾರ್ ಪ್ರಧಾನ್ ಎಂಬುವರ ರುಂಡ ಕತ್ತರಸಿ, ಪೂಜೆ ಸಲ್ಲಿಸಿದ್ದಾನೆ. ಕೃತ್ಯ ಎಸಗುತ್ತಿದ್ದಂತೆ ಬುಧವಾರ ರಾತ್ರಿಯೇ ಅರ್ಚಕ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಆರೋಪಿ ಪ್ರಕರಣದ ಕುರಿತು ಬಾಯ್ಬಿಟ್ಟಿದ್ದು, ಕನಸಿನಲ್ಲಿ ದೇವರು ಆದೇಶ ನೀಡಿದ ಹಿನ್ನೆಲೆ ನರ ಬಲಿ ನೀಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಮನುಷ್ಯರನ್ನು ಬಲಿ ನೀಡಿದರೆ ಕೊರೊನಾ ತೊಲಗುತ್ತದೆ ಎಂದು ದೇವರು ಹೇಳಿರುವ ಕುರಿತು ಹೇಳಿಕೆ ನೀಡಿದ್ದಾನೆ.
ಸದ್ಯ ಪೊಲೀಸರು ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇನ್ನು ಈ ಬಗ್ಗೆ ಸೆಂಟ್ರಲ್ ರೇಂಜ್ ಡಿಐಜಿ ಆಶಿಶ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ವಿಪರೀತವಾಗಿ ಕುಡಿದಿದ್ದ. ಮರುದಿನ ಬೆಳಗ್ಗೆ ತನ್ನ ತಪ್ಪಿನ ಅರಿವಾಗಿ ಶರಣಾಗತನಾಗಿದ್ದಾನೆ. ಕೊಲೆಯನ್ನು ತಾನೇ ಮಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದೇವರು ಕನಸಿನಲ್ಲಿ ಬಂದು ಮನುಷ್ಯರನ್ನು ಬಲಿ ನೀಡಿದರೆ ಕೊರೊನಾ ತೊಲಗುತ್ತದೆ ಎಂದಿತು. ಹೀಗಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಅರ್ಚಕ ಮಾನಸಿಕ ಅಸ್ವಸ್ಥ ಎಂದು ತಿಳಿಸಿದ್ದಾರೆ.








