ಯಾವುದೇ ಕಾರಣಕ್ಕೂ ಶಾಲೆಗಳನ್ನು ಬಂದ್ ಮಾಡುವುದಿಲ್ಲ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಿದೆ, ಆದರೆ ಶಾಲೆಗಳನ್ನು ಕ್ಲೋಸ್ ಮಾಡಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಿರ್ಧರಿಸುವಂತೆ ಮೇ 16 ರಿಂದ ಶಾಲೆಗಳು ಪ್ರಾರಂಭವಾಗುತ್ತವೆ. ಜೂನ್, ಜುಲೈನಲ್ಲಿ 4ನೇ ಅಲೆ ಎಂದು ಹೇಳುತ್ತಿದ್ದು, ಈಗಾಗಲೇ ಸಿಎಂ ಕೂಡಾ ಸಭೆ ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ನಮಗೆ ನೀಡುವ ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲನೆ ಮಾಡುತ್ತೇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಶಾಲೆಗಳು ಬಂದ ಮಾಡಲ್ಲ ಎಂದು ಸ್ಪಷ್ಟ ಪಡಿಸಿದರು.
ಇನ್ನೂ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರವೇ ಉಚಿತ ಲಸಿಕೆ ನೀಡುತ್ತಿದ್ದು, ಈಗ ಪರೀಕ್ಷೆಗಳು ನಡೆಯುತ್ತಿರುವುದರಿಂದ ಶಾಲೆಗಳಲ್ಲಿ ಲಸಿಕೆ ಕೊಡೊದು ಸದ್ಯಕ್ಕೆ ನಿಲ್ಲಿಸಲಾಗಿದೆ. ಪರೀಕ್ಷೆಗಳು ಮುಗಿದ ಬಳಿಕ ಶಾಲೆಗಳಲ್ಲಿ ಲಸಿಕೆ ಅಭಿಯಾನ ಮತ್ತೆ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಇನ್ನೂ ಪಿಯುಸಿ ಪರೀಕ್ಷೆಗಳು ಉತ್ತಮವಾಗಿ ನಡೆಯುತ್ತಿದೆ. ಉತ್ತಮ ಹಾಜರಾತಿ ಇದೆ. ಜೊತೆಗೆ ಎಸ್ಎಸ್ಎಲ್ಸಿ ಮೌಲ್ಯಮಾಪನ ಉತ್ತಮವಾಗಿ ನಡೆಯುತ್ತಿದೆ. ಹೀಗೆ ನಡೆದರೆ ಮೇ 2ನೇ ವಾರದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ನೀಡುತ್ತೇವೆ ಎಂದು ತಿಳಿಸಿದರು.
ಕ್ಲಾರೆನ್ಸ್ ಶಾಲೆ ಬೈಬಲ್ ಕಡ್ಡಾಯ ನಿಯಮವು ಸರ್ಕಾರದ ನಿಯಮಕ್ಕೆ ವಿರೋಧವಾಗಿದೆ. ಈ ಶಾಲೆ ತಪ್ಪು ಮಾಡಿದೆ. ಶಿಕ್ಷಣ ಇಲಾಖೆ ಮೂಲಕ ನೋಟಿಸ್ ನೀಡಲಾಗಿದೆ. ಡಿಡಿಪಿಐ, ಬಿಇಓ ಮೂಲಕ ನೋಟಿಸ್ ನೀಡಲಾಗಿದೆ. ಆ ಶಾಲೆ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸೋಮವಾರ ಶಾಲೆಗೆ ನೋಟಿಸ್ ನೀಡಲಾಗಿದೆ. ಕೂಡಲೇ ಲೀಗಲ್ ಪ್ರೊಸೆಸ್ ಮಾಡುತ್ತೇವೆ. ಸಿಬಿಎಸ್ಇ ಬೋರ್ಡ್ಗೂ ಈ ಬಗ್ಗೆ ಬರೆಯುತ್ತೇವೆ. ಯಾವ ಶಾಲೆಯೂ ಕೂಡಾ ಧರ್ಮದ ಬುಕ್ ಓದಿ ಅಂತ ಹೇಳುವ ಹಾಗೆ ಇಲ್ಲ. ರಾಜ್ಯ ಸರ್ಕಾರ ಎನ್ಓಸಿ ನೀಡುತ್ತದೆ. ಶಿಕ್ಷಣ ಇಲಾಖೆ ನಿಯಮದ ಅಡಿಯಲ್ಲಿ ಶಾಲೆ ಕೆಲಸ ನಿರ್ವಹಣೆ ಮಾಡಬೇಕು ಎಂದು ಹೇಳಿದರು.
ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ತರುತ್ತೇವೆ ಅಂದಾಗ ಜಾತ್ಯಾತೀತರು, ರಾಜಕೀಯ ಪಕ್ಷದ ನಾಯಕರು ಭಗವದ್ಗೀತೆ ವಿರುದ್ಧ ಮಾತಾಡಿದರು. ಈಗ ಯಾಕೆ ಯಾರು ಮಾತಾಡುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್ ಅವರು ಈಗ ಎಲ್ಲಿ ಹೋದ್ರು. ಬುದ್ಧಿ ಜೀವಿಗಳು ಈಗ ಎಲ್ಲಿ ಹೋದರು. ಟಿಪ್ಪು ಬಗ್ಗೆ ಬಂದರೆ ಮಾತಾಡ್ತಾರೆ. ಈಗ ಯಾಕೆ ಯಾರು ಮಾತಾಡುತ್ತಿಲ್ಲ. ಶಾಲೆ ಮಾಡ್ತಿರೋದು ತಪ್ಪು ಅಂತ ಯಾಕೆ ಕಾಂಗ್ರೆಸ್ ಹೇಳುತ್ತಿಲ್ಲ ಎಂದು ಕಿಡಿಕಾರಿದರು.