ಕೋಲಾರ: ಬಾಕಿ ಹಣ ಕೇಳಿದ್ದಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಮರೇಶ್ (29) ಹಲ್ಲೆಗೊಳಗಾದ ಯುವಕ ಎನ್ನಲಾಗಿದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಓರ್ವ ವ್ಯಕ್ತಿ ತಲೆ ಮರೆಸಿಕೊಂಡಿದ್ದಾನೆ.
ಗಾಯಾಳು ಅಮರೇಶ್, ಜಗದೀಶ್ ಸಿಂಗ್ ಎಂಬುವವರ ಮನೆ ನಿರ್ಮಾಣದ ಕೆಲಸಕ್ಕೆ ತೆರಳುತ್ತಿದ್ದರು. ವಾರದ ಕೂಲಿ 3,500 ರೂಪಾಯಿ ನಿಗದಿಯಾಗಿತ್ತು. 2 ಸಾವಿರ ರೂ.ವನ್ನು ಜಗದೀಶ್ ನೀಡಿದ್ದರು. ಇನ್ನುಳಿದ ಬಾಕಿ 1,500 ಹಣ ನೀಡಬೇಕಿತ್ತು. ಜಗದೀಶ್ ಸಿಂಗ್ ತಮ್ಮ ಸಹೋದರರಾದ ರವಿ ಸಿಂಗ್ ಹಾಗೂ ಸತೀಶ್ ಸಿಂಗ್ ಜೊತೆಗೆ ಹೋಗುತ್ತಿದ್ದರು. ಈ ವೇಳೆ ಅಮರೇಶ್ ಹಣ ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಸಹೋದರರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಬಂಧಿತ ಆರೋಪಿಗಳು ದೂರುದಾರರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.