ಶೋಭಾಯತ್ರೆ ವೇಳೆ ಕಲ್ಲು ತೂರಾಟ | 144 ಸೆಕ್ಷನ್ ಜಾರಿ
ಕೋಲಾರ: ಶ್ರೀರಾಮ ನವಮಿ ಅಂಗವಾಗಿ ಭವ್ಯ ಶೋಭಾಯತ್ರೆ ವೇಳೆ ಕಲ್ಲು ತೂರಾಟ ನಡೆದಿದ್ದು, ಸಧ್ಯ ಮುಳಬಾಗಿಲು ಪಟ್ಟಣದಲ್ಲಿ 3ದಿನಗಳ ವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ.
ನಿನ್ನೆ ಶುಕ್ರವಾರ ಸಾಯಂಕಾಲ ಪಟ್ಟಣದಲ್ಲಿ ಶ್ರೀರಾಮ ನವಮಿ ಅಂಗವಾಗಿ ಲವಕುಶ ಜನ್ಮಭೂಮಿ ಪುಣ್ಯಕ್ಷೇತ್ರ ಟ್ರಸ್ಟ್ ವತಿಯಿಂದ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಮೊದಲ ದಿನವಾದರಿಂದ ಭವ್ಯ ಶೋಭಾಯಾತ್ರೆ ನಡೆಯುವಾಗ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.
ಈ ಸಂಬಂಧ ಮುಳಬಾಗಿಲು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ ಮಾಡಲಾಗಿದ್ದು, ಬೂದಿ ಮುಚ್ಚಿದ ಕೆಂಡದಂತಾದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇನ್ನೂ ಪಟ್ಟಣದಲ್ಲಿ ಅಹಿತಕರ ಘಟನೆಗಳು ನಡೆಯದಂತೆ 2 ಕೆಎಸ್ಆರ್ ಪಿ, 6 ಡಿಎಆರ್ ತುಕುಡಿಗಳನ್ನು ನಿಯೋಜನೆ ಮಾಡಲಾಗಿದೆ.
ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಂದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಇನ್ನೂ ಘಟನೆಯಲ್ಲಿ ರಸ್ತೆ ಬಳಿ ಇದ್ದ ಬೈಕ್ವೊಂದಕ್ಕೆ ಬೆಂಕಿ ಹಚ್ಚಿದ್ದು, ರಸ್ತೆ ಬದಿ ಇದ್ದ ಕೆಲವು ಕಾರ್ಗಳ, ಪೊಲೀಸರ ವಾಹನಗಳು ಹಾನಿಯಾಗಿವೆ.