ಡಿಸಿಸಿ ಬ್ಯಾಂಕ್ ಉಪಚುನಾವಣೆ | ರಾಜ್ಯ ನಾಯಕರ ಚಿತ್ತ ಡಿಸಿಸಿ ಬ್ಯಾಂಕ್ ನತ್ತ
ಬೆಳಗಾವಿ: ರಾಜ್ಯ ರಾಜಾಕರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಡಿಸಿಸಿ ಬ್ಯಾಂಕ್ ನ ನಿರ್ದೇಶಕರ ಉಪಚುನಾವಣೆ ನಡೆಯಲಿದೆ.
ಒಂದೇ ಸ್ಥಾನಕ್ಕೆ ನಡೆಯಲಿರುವ ಉಚುನಾವಣೆಗೆ ರಾಜ್ಯದ ಘಟಾನುಘಟಿ ನಾಯಕರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಈ ಚುನಾವಣೆಯನ್ನು ಲಕ್ಷ್ಮಣ ಸವದಿ, ಸಚಿವ ಉಮೇಶ ಕತ್ತಿ ಹಾಗೂ ಜಾರಕಿಹೊಳಿ ಬ್ರದರ್ಸ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಈ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಚಿತ್ತ ಡಿಸಿಸಿ ಬ್ಯಾಂಕ್ ಚುನಾವಣೆಯತ್ತ ನೆಟ್ಟಿದೆ.
ಇನ್ನೂ ಬೆಳಗಾವಿಯಲ್ಲಿ ಬಿಜೆಪಿಯಲ್ಲೇ ಎರಡು ಬಣಗಳಾಗಿವೆ. ಬಿಜೆಪಿಯಲ್ಲೇ ಇರುವ ಕತ್ತಿ ಸಹೋದರರು, ಜೊಲ್ಲೆ ದಂಪತಿ, ಲಕ್ಷ್ಮಣ ಸವದಿ ಹಾಗೂ ಪ್ರಭಾಕರ ಕೋರೆ ಒಂದು ಬಣವಾದರೆ ಇತ್ತ ಜಾರಕಿಹೊಳಿ ಬ್ರದರ್ಸ್ ಒಂದಾಗಿದ್ದಾರೆ. ಒಂದು ಸ್ಥಾನ ಪಡೆಯಲು ಜಿಲ್ಲೆಯ ಘಟಾನುಘಟಿ ನಾಯಕರು ಪಣತೊಟ್ಟಿದ್ದು, ಚುನಾವಣೆ ರಂಗು ಪಡೆದಿದೆ.
ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕ್ಷೇತ್ರದಿಂದ ಲಕ್ಷ್ಮಣ ಸವದಿ ಆಪ್ತ ಅಶೋಕ ಅವಕ್ಕನವರ ಈ ಹಿಂದೆ ಆಯ್ಕೆ ಆಗಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದ ಇದೀಗ ಉಪಚುನಾವಣೆ ಎದುರಾಗಿದ್ದು, ಅಶೋಕ ಅವರ ಪುತ್ರ ಸಂಜು ಅವಕ್ಕನವರ ಸವದಿ ಬಣದಿಂದ ಕಣಕ್ಕಿಳಿದಿದ್ದಾರೆ. ಇತ್ತ ಬಾಲಚಂದ್ರ ಜಾರಕಿಹೊಳಿ ಇಬ್ಬರು ಆಪ್ತರನ್ನು ಕಣಕ್ಕಿಳಿಸಿದ್ದಾರೆ. ರಾಮದುರ್ಗದ ಫತೇಸಿಂಹ್ ಜಗಪಾತ್, ಮುನವಳ್ಳಿಯ ರವೀಂದ್ರ ಯಳಿಗಾರ ಜಾರಕಿಹೊಳಿ ಬಣದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲೆಯ ಹತ್ತು ತಾಲೂಕಿನ ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ತಲಾ ಒಬ್ಬ ನಿರ್ದೇಶಕರು ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಬೆಳಗ್ಗೆ 11ಗಂಟೆಯಿಂದ 4 ಗಂಟೆಯವರೆಗೆ ಡಿಸಿಸಿ ಬ್ಯಾಂಕ್ ನಲ್ಲಿ ಈ ಚುನಾವಣೆಯ ಮತದಾನ ನಡೆಯಲಿದೆ. ಬೆಳಗಾವಿ ನಾಯಕರು ಈ ಚುನಾವಣೆಯನ್ನು ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.