ತೆಲಂಗಾಣ : ತೆಲಂಗಾಣದ ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯೋರ್ವನ ಮೃತದೇಹವನ್ನ ಆಟೋ ರಿಕ್ಷಾದಲ್ಲಿ ಸ್ಮಶಾನಕ್ಕೆ ಸಾಗಿಸಲಾಗಿದೆ.
50 ವರ್ಷದ ವ್ಯಕ್ತಿ ಕೋವಿಡ್ ಕಾರಣ ಕಳೆದ ಜೂನ್ 27ರಂದು ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮೃತದೇಹವನ್ನ ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಆಸ್ಪತ್ರೆ ಆಂಬುಲೆನ್ಸ್ ನೀಡದ ಕಾರಣ ವ್ಯಕ್ತಿಯ ಮೃತದೇಹ ಆಟೋದಲ್ಲಿ ಸ್ಮಶಾನದವರೆಗೆ ತೆಗೆದುಕೊಂಡು ಹೋಗಲಾಗಿದೆ.
ಈ ಘಟನೆ ಬಗ್ಗೆ ಆಸ್ಪತ್ರೆ ಮೆಲ್ವಿಚಾರಕ ಡಾ. ನಾಗೇಶ್ವರ್ ರಾವ್ ಪ್ರತಿಕ್ರಿಯೆ ನೀಡಿದ್ದು, ಮೃತ ವ್ಯಕ್ತಿಯ ಸಂಬಂಧಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದು, ಅವರ ಮನವಿ ಮೇರೆಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಆಟೋ ರಿಕ್ಷಾದಲ್ಲಿ ಶವ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ಆಸ್ಪತ್ರೆ ಆಂಬುಲೆನ್ಸ್ ಬೇರೆಡೆ ಹೋಗಿದ್ದರಿಂದ ಅದು ಬರುವವರೆಗೂ ಕಾಯುವಂತೆ ಹೇಳಲಾಗಿತ್ತು. ಆದರೆ ಸಂಬಂಧಿಕರು ತಮ್ಮದೇ ಆಟೋದಲ್ಲಿ ಸ್ಮಶಾನದವರೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ.