ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಲಡಾಖ್ ಗೆ ಭೇಟಿ
ಹೊಸದಿಲ್ಲಿ, ಜುಲೈ 2: ಭಾರತ-ಚೀನಾ ನಡುವಿನ ಘರ್ಷಣೆಯ ಬಳಿಕ ಮೊದಲ ಬಾರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತದ ಮಿಲಿಟರಿ ಸನ್ನದ್ಧತೆಯನ್ನು ಪರಿಶೀಲಿಸಲು ಶುಕ್ರವಾರ ಲಡಾಖ್ಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೀನಾವು ಗಡಿ ಪ್ರದೇಶದಲ್ಲಿ ಹೆಚ್ಚು ಸೇನೆಯನ್ನು ಜಮಾವಣೆ ಮಾಡುತ್ತಿರುವುದರಿಂದ ಉಂಟಾಗಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಭಾರತದ ಮಿಲಿಟರಿ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಜನರಲ್ ಎಂ.ಎಂ. ನರವಾನೆ ಅವರ ಜೊತೆಗೆ ಲೇಹ್ಗೆ ಭೇಟಿ ನೀಡಲಿದ್ದಾರೆ. ಅಷ್ಟೇ ಅಲ್ಲ ಹಿರಿಯ ಮಿಲಿಟರಿ ನಾಯಕರೊಂದಿಗೆ ರಾಜನಾಥ್ ಸಿಂಗ್ ಉನ್ನತ ಮಟ್ಟದ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಸರ್ಕಾರದ ಮೂಲಗಳ ಪ್ರಕಾರ ಈಗಾಗಲೇ ಒಂದು ದಿನದ ಭೇಟಿಗಾಗಿ ಎಲ್ಲಾ ಸಿದ್ದತೆ ನಡೆದಿದ್ದು, ಯೋಜನೆಯಂತೆ ಸೇನಾ ಜನರಲ್ ಎಂ.ಎಂ. ನರವಾನೆ ಅವರ ಜೊತೆ ಮುಂದಿನ ಶುಕ್ರವಾರ ಲಡಾಕ್ಗೆ ಭೇಟಿ ನೀಡಲಿದ್ದಾರೆ.
ಕಳೆದ ಮಂಗಳವಾರ ಲೇಹ್ ಮೂಲದ ಎಕ್ಸ್ ಐ ವಿ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಹಾಗೂ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ, ದಕ್ಷಿಣ ಕ್ಸಿನ್ಜಿಯಾಂಗ್ ಮಿಲಿಟರಿ ಪ್ರದೇಶದ ಮುಖ್ಯಸ್ಥ ಮೇಜರ್-ಜನರಲ್ ಲಿಯು ಲಿನ್ ನಡುವೆ ಮೂರು ಸುತ್ತಿನ ಮಾತುಕತೆ ನಡೆದಿದ್ದು, ಈ ಮಾತುಕತೆಯ ಬಳಿಕ ರಾಜನಾಥ್ ಸಿಂಗ್ ಲಡಾಖ್ಗೆ ಆಗಮಿಸುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.