Delhi liquor policy scam case: ಮನೀಶ್ ಸಿಸೋಡಿಯಾ ವಿರುದ್ಧ ಶೀಘ್ರದಲ್ಲೇ ED ಪ್ರಕರಣ…
ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮ ಆರೋಪ ಹೊತ್ತಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ CBI ಬಳಿಕ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಲು ಮುಂದಾಗಿದೆ. ಸಿಸೋಡಿಯಾ ಹಾಗೂ ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿಕೊಂಡಿದ್ದು, ಈ ಎಫ್ಐಆರ್ ಪ್ರತಿಯನ್ನು ಸಿಬಿಐ ಭಾನುವಾರ ಇಡಿಗೆ ಹಸ್ತಾಂತರಿಸಿದೆ.
ದೆಹಲಿ ರಾಜ್ಯ ಅಬಕಾರಿ ನೀತಿ 2021-22ಕ್ಕೆ ಸಂಬಂಧಿಸಿದ ಅಕ್ರಮಗಳಿಗಾಗಿ ಮನೀಶ್ ಸಿಸೋಡಿಯಾ ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಈ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಲ್ಲಿ ಭಾಗಿಯಾಗಿರುವ ಮದ್ಯದ ವ್ಯಾಪಾರಿಗಳಲ್ಲಿ ಸಮೀರ್ ಮಹೇಂದ್ರು ಒಬ್ಬರು ಎಂದು ಅದು ಹೇಳಿದೆ. ಸಮೀರ್ ಇಂಡೋಸ್ಪಿರಿಟ್ ಕಂಪನಿಯ ಮಾಲೀಕ. ಮನೀಷ್ ಸಿಸೋಡಿಯಾ ಅವರಿಗೆ ಹತ್ತಿರವಾದವರಿಗೆ ಸಮೀರ್ ಎರಡು ಬಾರಿ ಕೋಟ್ಯಂತರ ರೂಪಾಯಿ ಪಾವತಿಸಿದ್ದರು ಎಂದು ವಿವರಿಸಲಾಗಿದೆ.
ಅಬಕಾರಿ ನೀತಿ ಜಾರಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳು ದೇಶ ತೊರೆಯದಂತೆ ತಡೆಯಲು ಸಿಬಿಐ ಭಾನುವಾರ ಮನೀಶ್ ಸಿಸೋಡಿಯಾ ಮತ್ತು ಇತರ 13 ಮಂದಿ ವಿರುದ್ಧ ಲುಕ್ಔಟ್ ಸುತ್ತೋಲೆ ಹೊರಡಿಸಿದೆ. ಈ ಪ್ರಕರಣದಲ್ಲಿ ಎಲ್ಲರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಮನೀಶ್ ಸಿಸೋಡಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿ ಇದು ನಾಟಕವೇ ಎಂದು ಪ್ರಶ್ನಿಸಿದ್ದಾರೆ. ಇಂದು ಸಿಬಿಐಗೆ ಯಾರಿಗೆ ಲುಕ್ಔಟ್ ನೋಟಿಸ್ ನೀಡಬೇಕೆಂದು ಪ್ರಧಾನಿ ಚಿಂತನೆ ನಡೆಸುತ್ತಿರುವುದು ವಿಷಾದನೀಯ. ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಪರಿಹರಿಸುವ ನಾಯಕನನ್ನು ದೇಶ ಹುಡುಕುತ್ತಿದೆ ಎಂದು ಹೇಳಿದ್ದಾರೆ.