ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ (OPS) ಜಾರಿಗೊಳಿಸದಿದ್ದರೆ, ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ ನೀಡಬೇಕೆಂಬ ಹೋರಾಟವನ್ನು ರೂಪಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೌಕರರ ಹಕ್ಕುಗಳು ಮತ್ತು ಸಂಘಟನೆಯ ಮುಂದಿನ ನಡೆಗಳ ಕುರಿತು ವಿಸ್ತೃತವಾಗಿ ಮಾತನಾಡಿದರು.
ಎನ್ ಪಿಎಸ್ ರದ್ದು ಮತ್ತು ಒಪಿಎಸ್ ಜಾರಿ ಅನಿವಾರ್ಯ
ರಾಜ್ಯದಲ್ಲಿ ಸುಮಾರು 2.90 ಲಕ್ಷ ನೌಕರರು ಎನ್ಪಿಎಸ್ (ಹೊಸ ಪಿಂಚಣಿ ಯೋಜನೆ) ವ್ಯಾಪ್ತಿಯಲ್ಲಿದ್ದಾರೆ. ಎನ್ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿ ಮಾಡಬೇಕು ಎಂಬುದು ನೌಕರರ ಪ್ರಮುಖ ಹಕ್ಕೊತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸಂಘದ ಪ್ರಯತ್ನದಿಂದ ಸರ್ಕಾರ ಈಗಾಗಲೇ ಸಕಾರಾತ್ಮಕವಾಗಿ ಸ್ಪಂದಿಸುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ 5 ವರ್ಷಗಳಲ್ಲಿ ಸಂಘದ ಹೋರಾಟದ ಫಲವಾಗಿ ಹತ್ತಾರು ಮಹತ್ವದ ಬದಲಾವಣೆಗಳಾಗಿವೆ ಎಂದು ಅವರು ತಿಳಿಸಿದರು.
ಕೇಂದ್ರ ಮಾದರಿ ವೇತನಕ್ಕೆ ಪಟ್ಟು
ಒಂದು ವೇಳೆ ಸರ್ಕಾರ ಒಪಿಎಸ್ ಜಾರಿಗೊಳಿಸಲು ವಿಫಲವಾದರೆ, ದೇಶದ ಇತರೆ 22 ರಾಜ್ಯಗಳು ಜಾರಿಗೆ ತಂದಿರುವಂತೆ, ಕರ್ನಾಟಕದಲ್ಲೂ ಸೆಂಟ್ರಲ್ ಪೇ (ಕೇಂದ್ರ ಮಾದರಿ ವೇತನ) ಯೋಜನೆಯನ್ನು ಜಾರಿಗೊಳಿಸಲೇಬೇಕಾಗುತ್ತದೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆಯಲಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ ಎಂದು ಷಡಕ್ಷರಿ ಸ್ಪಷ್ಟಪಡಿಸಿದರು.
ಗೈರು ಹಾಜರಾದ ನೌಕರರಿಗೆ ಚಾಟಿ
ಇದೇ ಸಂದರ್ಭದಲ್ಲಿ, ಸಂಘದ ಕಾರ್ಯಕ್ರಮಕ್ಕೆ ಗೈರು ಹಾಜರಾದ ಸಾಗರ ತಾಲ್ಲೂಕಿನ ನೌಕರರ ವಿರುದ್ಧ ಷಡಕ್ಷರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾಗರದಲ್ಲಿ 1,700ಕ್ಕೂ ಹೆಚ್ಚು ನೌಕರರಿದ್ದರೂ ಶೇ.50 ರಷ್ಟು ಮಂದಿ ಗೈರಾಗಿರುವುದು ಸರಿಯಲ್ಲ. ಸಂಘಟನೆಯ ಕರೆಗೆ ನಿರ್ಲಕ್ಷ್ಯ ತೋರುವುದು ಮತ್ತು ಅತೀ ಬುದ್ಧಿವಂತಿಕೆ ಪ್ರದರ್ಶಿಸುವುದನ್ನು ಸಹಿಸಲು ಸಾಧ್ಯವಿಲ್ಲ. ನಿಮ್ಮ ಕಾರ್ಯಕ್ರಮಕ್ಕೆ ನೀವೇ ಬಾರದಿದ್ದರೆ ನಾವೇಕೆ ಬರಬೇಕು ಎಂದು ಪ್ರಶ್ನಿಸುವ ಮೂಲಕ ನೌಕರರಿಗೆ ಬಿಸಿ ಮುಟ್ಟಿಸಿದರು.
ಸಂಘಟನೆಯ ಹೋರಾಟದ ಫಲವಾಗಿಯೇ 7ನೇ ವೇತನ ಆಯೋಗ ಜಾರಿಯಾಗಿದ್ದು, ಇದರ ಲಾಭ ಪ್ರತಿಯೊಬ್ಬ ನೌಕರರಿಗೂ ತಲುಪಿದೆ. ಇದಲ್ಲದೆ, ಮಹಿಳಾ ನೌಕರರಿಗೆ ಋತುಚಕ್ರ ರಜೆ, ನೌಕರರ ಪೋಷಕರಿಗೆ ಉಚಿತ ಆರೋಗ್ಯ ಚಿಕಿತ್ಸೆ ಮತ್ತು ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರದಂತಹ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಸಂಘದ ಸಾಧನೆಗಳನ್ನು ಅವರು ಬಿಚ್ಚಿಟ್ಟರು.
ಖಾಲಿ ಹುದ್ದೆಗಳ ಮಧ್ಯೆಯೂ ಪ್ರಾಮಾಣಿಕ ಸೇವೆ
ರಾಜ್ಯದಲ್ಲಿ 2.73 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದರಿಂದ ಹಾಲಿ ಇರುವ ನೌಕರರ ಮೇಲೆ ವಿಪರೀತ ಕೆಲಸದ ಒತ್ತಡವಿದೆ. ಆದರೂ ನೌಕರರು ತಮ್ಮ ವೇತನಕ್ಕೆ ತಕ್ಕಂತೆ, ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಲೆನಾಡು ಹಾಗೂ ಗಡಿಭಾಗದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ನೌಕರರು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎನ್, ರಾಜ್ಯಾಧ್ಯಕ್ಷರ ಕಾರ್ಯವೈಖರಿಯನ್ನು ಪಾದರಸಕ್ಕೆ ಹೋಲಿಸಿದರು. ಸಿ.ಎಸ್. ಷಡಕ್ಷರಿ ಅವರು ನೌಕರರ ಪರವಾಗಿ ನಿರಂತರವಾಗಿ ಸ್ಪಂದಿಸುವ ಯುವ ನಾಯಕರಾಗಿದ್ದು, ಕ್ರೀಡಾಕೂಟಕ್ಕೆ 3 ಕೋಟಿ ಅನುದಾನ ತರುವ ಮೂಲಕ ಕ್ರೀಡಾಸ್ಪೂರ್ತಿ ತುಂಬಿದ್ದಾರೆ ಎಂದು ಶ್ಲಾಘಿಸಿದರು. ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಸಹಕಾರವನ್ನೂ ಇದೇ ವೇಳೆ ಸ್ಮರಿಸಲಾಯಿತು.








