ಬಾಗಲಕೋಟೆ: ರಂಭಾಪುರಿ ಶ್ರೀಗಳ ಕಾರಿನ ಮೇಲೆ ಭಕ್ತರು ಚಪ್ಪಲಿ ಎಸೆದಿರುವ ಘಟನೆಯೊಂದು ನಡೆದಿದೆ.
ಬಾಗಲಕೋಟೆ ಜಿಲ್ಲೆಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆಯ ವಿವಾದ ಜೋರಾಗಿದ್ದು, ಈ ಪ್ರಕರಣ ಕೋರ್ಟ್ ನಲ್ಲಿತ್ತು. ಈ ಸಂದರ್ಭದಲ್ಲಿಯೇ ಗಂಗಾಧರ ಸ್ವಾಮೀಜಿ ಅವರಿಂದ ಮಠದ ದುರಸ್ತಿ, ಮಠದ ಹೊಲದ ಊಳುಮೆ ಮಾಡಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಹೀಗಾಗಿ ರಂಭಾಪುರಿ ಜಗದ್ಗುರುಗಳ ವಿರುದ್ಧ ಕಲಾದಗಿಯಲ್ಲಿ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ರಂಭಾಪುರಿ ಶ್ರೀಗಳು ಚಲಿಸುತ್ತಿದ್ದ ಕಾರಿಗೆ ಮಹಿಳೆಯೊಬ್ಬರು ಚಪ್ಪಲಿ ತೂರಿದ್ದಾರೆ ಎನ್ನಲಾಗಿದೆ.
ರಂಭಾಪುರಿ ಶ್ರೀಗಳು ತೆರಳುವ ವಾಹನ ಅಡ್ಡಗಟ್ಟಲು ಪ್ರಯತ್ನ ನಡೆದಿದೆ. ಈ ವೇಳೆ ತಳ್ಳಾಟ, ನೂಕಾಟ ಸ್ಥಳದಲ್ಲಿ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಶ್ರೀಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಭಕ್ತರು ಶ್ರೀಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.
ರಂಭಾಪುರಿ ಜಗದ್ಗುರು ಪೀಠದ ಶಾಖಾ ಮಠ ತಾಲೂಕಿನ ಕಲಾದಗಿ ಗ್ರಾಮದಲ್ಲಿದೆ. ವಿವಾದ ಕೋರ್ಟ್ ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ಗಂಗಾಧರ ಸ್ವಾಮೀಜಿ ತಕರಾರು ಮಾಡಿದ್ದಾರೆ.