ಮಂಗಳೂರು: ಇಡೀ ರಾಜ್ಯದ ಗಮನ ಸೆಳೆದಿರುವ ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆದಿವೆ. ದೂರುದಾರನ ಹೇಳಿಕೆ ದಾಖಲಾದ ಬೆನ್ನಲ್ಲೇ, ಬೆಳ್ತಂಗಡಿ ಪೊಲೀಸರು ಅಸ್ಥಿಪಂಜರದ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ದೂರಿನಲ್ಲಿ ಉಲ್ಲೇಖಿಸಲಾಗಿರುವಂತೆ ಹೂತುಹಾಕಿದ್ದ ಅಸ್ಥಿಪಂಜರವೊಂದನ್ನು ಸಾಕ್ಷಿಯಾಗಿ ಹೊರತೆಗೆಯಲಾಗಿದ್ದು, ಇದನ್ನು ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಕಾನೂನು ಪ್ರಕ್ರಿಯೆಗಳ ಪೂರ್ಣ: ನ್ಯಾಯಾಧೀಶರ ಎದುರು ಹೇಳಿಕೆ
‘ಧರ್ಮಸ್ಥಳ ದೂರುದಾರರ ಪರ ವಕೀಲ’ ಪವನ್ ಶ್ಯಾಮ್ ಅವರು ಮಾತನಾಡಿ, “ಕಾನೂನು ಪ್ರಕಾರ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ನ್ಯಾಯಾಧೀಶರ ಎದುರು ಹೇಳಿಕೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ. ಜುಲೈ 11 ರಂದು ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ದೂರುದಾರರನ್ನು ಹಾಜರುಪಡಿಸಲಾಗಿತ್ತು. ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಸಾಮೂಹಿಕವಾಗಿ ಹೂತುಹಾಕಿದ ಆರೋಪವನ್ನು ದೂರುದಾರರು ಮಾಡಿದ್ದಾರೆ.
ಪೊಲೀಸ್ ವಶಕ್ಕೆ ಅಸ್ಥಿಪಂಜರದ ಅವಶೇಷಗಳು
ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಈ ಕುರಿತು ಮಾಹಿತಿ ನೀಡಿ, “ದೂರುದಾರ ಸಾಕ್ಷಿದಾರರು ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ” ಎಂದರು. ಅಲ್ಲದೆ, “ದೂರುದಾರ ಸಾಕ್ಷಿಯು ಸ್ವತಃ ಹೊರತೆಗೆದಿರುವುದಾಗಿ ಹೇಳಿಕೊಂಡ ಅಸ್ಥಿಪಂಜರದ ಅವಶೇಷಗಳನ್ನು ಸಹ ಹಾಜರುಪಡಿಸಿದರು ಮತ್ತು ದೂರುದಾರ ಸಾಕ್ಷಿಯ ವಕೀಲರು ಮತ್ತು ಪಂಚ ಸಾಕ್ಷಿಗಳ ಸಮ್ಮುಖದಲ್ಲಿ ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸಾಕ್ಷಿಗಳ ರಕ್ಷಣೆಗೆ ಅನುಮೋದನೆ, ಗುರುತು ಬಹಿರಂಗಪಡಿಸದಿರಲು ನಿರ್ಧಾರ
ಜಿಲ್ಲೆಯ ಸಕ್ಷಮ ಪ್ರಾಧಿಕಾರವು ನಿನ್ನೆ ಸಂಜೆ ದೂರುದಾರರ ಸಾಕ್ಷಿಗಳ ರಕ್ಷಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಆದಾಗ್ಯೂ, ದೂರುದಾರ ಸಾಕ್ಷಿಯ ಗುರುತಿನ ರಕ್ಷಣೆಗೆ ಸಂಬಂಧಿಸಿದಂತೆ ಕೆಲವು ಸವಾಲುಗಳಿವೆ. “ದೂರುದಾರ ಸಾಕ್ಷಿಯನ್ನು ಪ್ರತಿನಿಧಿಸುವವರು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸಾರ ಮಾಡಿದ ಪತ್ರಿಕಾ ಟಿಪ್ಪಣಿ ಮತ್ತು ಎಫ್ಐಆರ್ ಪ್ರತಿ (ವಯಸ್ಸು; ಸ್ವರೂಪ, ಅವಧಿ, ಕೆಲಸದ ಸ್ಥಳ ಇತ್ಯಾದಿ) ಈಗಾಗಲೇ ಅನೇಕ ಸ್ಥಳೀಯರು ದೂರುದಾರ ಸಾಕ್ಷಿಯ ಗುರುತನ್ನು ಕಡಿಮೆ ಮಾಡಲು ಕಾರಣವಾಗಿದೆ” ಎಂದು ಎಸ್ಪಿ ಅರುಣ್ ಕೆ. ಅವರು ಹೇಳಿದರು. ಇದರ ಹೊರತಾಗಿಯೂ, “ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಗುರುತನ್ನು ಬಹಿರಂಗಪಡಿಸದೆ ಇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಬಂಟ್ವಾಳ ಡಿಎಸ್ಪಿ ಅವರು ಪ್ರತ್ಯೇಕ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ” ಎಂದು ಅವರು ಸ್ಪಷ್ಟಪಡಿಸಿದರು.
ದೂರುದಾರ ಯಾವುದೇ ವಿಚಾರಣೆಗೆ ಸಿದ್ಧ: ವಕೀಲರ ಹೇಳಿಕೆ
ನ್ಯಾಯಾಲಯದ ಪ್ರಕ್ರಿಯೆಗಳ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಪವನ್ ದೇಶಪಾಂಡೆ (ಪವನ್ ಶ್ಯಾಮ್), “ಹೆಣಗಳನ್ನು ಹೂತುಹಾಕಿರುವ ಜಾಗಗಳನ್ನು ಸ್ಪಷ್ಟವಾಗಿ ದೂರುದಾರನು ಗುರುತಿಸಿ ತೋರಿಸಲು ಸಿದ್ಧನಿದ್ದಾನೆ. ಈ ಬಗ್ಗೆ ಪೊಲೀಸರು ಯಾವಾಗ ಬೇಕಾದರೂ ದಿನ ನಿಗದಿಪಡಿಸಿದ್ದರೂ ನಾವು ದೂರುದಾರನೊಂದಿಗೆ ಬಂದು ಸಹಕರಿಸಲಿದ್ದೇವೆ. ಘಟನೆಯ ಬಗ್ಗೆ ಮಾಹಿತಿಗಳನ್ನು ನೀಡಲಾಗಿದೆ” ಎಂದರು.
ಅಲ್ಲದೆ, “ಸಾಕ್ಷ್ಯ ನಾಶವಾಗುವ ಆತಂಕವೂ ಇದ್ದು, ಸಾಧ್ಯವಾದಷ್ಟು ವೇಗವಾಗಿ ಇಲ್ಲಿ ಹೇಳಿಕೆ ನೀಡಿರುವ ವ್ಯಕ್ತಿ ಹೂತುಹಾಕಿರುವ ಮೃತದೇಹಗಳನ್ನು ಹೊರತೆಗೆಯಲು ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆಯದ್ದು” ಎಂದು ಅವರು ಒತ್ತಿ ಹೇಳಿದರು. ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ದೂರುದಾರನನ್ನು ಪೊಲೀಸರು ಬಂಧಿಸಿಲ್ಲ ಅಥವಾ ಪೊಲೀಸ್ ಕಸ್ಟಡಿಗೆ ನೀಡಿಲ್ಲ ಎಂದು ವಕೀಲ ಪವನ್ ಶ್ಯಾಮ್ ಸ್ಪಷ್ಟಪಡಿಸಿದರು. “ಅವರು ನಮ್ಮೊಂದಿಗೆ ಇರುತ್ತಾರೆ. ಪೊಲೀಸರು ಯಾವಾಗ ಹಾಜರಾಗಲು ಸೂಚಿಸುತ್ತಾರೋ ಆಗ ಅವರನ್ನು ಹಾಜರುಪಡಿಸಲಾಗುವುದು” ಎಂದು ಅವರು ತಿಳಿಸಿದರು.
ಆರೋಪಿಗಳ ಕುರಿತು ಮಾಹಿತಿ
ಇಡೀ ಪ್ರಕರಣದ ಆರೋಪಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ವಕೀಲರು, “ಈ ಬಗ್ಗೆ ನ್ಯಾಯಾಲಯಕ್ಕೆ ನೀಡಲಾಗಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅದನ್ನು ನಮಗೆ ನೀಡಿಲ್ಲ. ಅದು ನ್ಯಾಯಾಲಯದಲ್ಲಿ ಮತ್ತು ತನಿಖಾಧಿಕಾರಿಯವರ ಬಳಿ ಇದೆ” ಎಂದು ಪ್ರತಿಕ್ರಿಯಿಸಿದರು.








