ಕೆಕೆಆರ್ ತಂಡಕ್ಕೆ ಮತ್ತೆ ಸಾರಥಿಯಾಗ್ತಾರಾ ದಿನೇಶ್ ಕಾರ್ತಿಕ್..!
ದಿನೇಶ್ ಕಾರ್ತಿಕ್.. ತಮಿಳುನಾಡಿನ ಪ್ರತಿಭಾನ್ವಿತ ಕ್ರಿಕೆಟಿಗ. ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಆಗಿರುವ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದ ಖಾಯಂ ಆಟಗಾರನಾಗಬೇಕಿತ್ತು.
ಆದ್ರೆ ಮಹೇಂದ್ರ ಸಿಂಗ್ ಧೋನಿಯ ವಿಶ್ವ ಕ್ರಿಕೆಟ್ ನಲ್ಲಿ ಸೂರ್ಯನಂತೆ ಕಂಗೊಳಿಸುತ್ತಿದ್ದ ಕಾರಣ ದಿನೇಶ್ ಕಾರ್ತಿಕ್ ತೆರೆಮರೆಯಲ್ಲೇ ಉಳಿಯಬೇಕಾಯ್ತು.
ಆದ್ರೂ ಆಗೊಮ್ಮೆ ಹೀಗೊಮ್ಮೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡ್ರೂ ಒಂದು ರೀತಿಯಲ್ಲಿ ಬಂದು ಹೋಗುವ ಆತಿಥಿ ಕ್ರಿಕೆಟಿಗನಾಗಿದ್ದಾರೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿದ್ರೂ ಟೀಮ್ ಇಂಡಿಯಾದಲ್ಲಿ ಖಾಯಂ ಆಟಗಾರನಾಗುವ ಭಾಗ್ಯ ಸಿಗಲಿಲ್ಲ.
ಏಷ್ಯಾಕಪ್ ನಲ್ಲಿ ಬಾಂಗ್ಲಾ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸರ್ ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿರುವ ದಿನೇಶ್ ಕಾರ್ತಿಕ್ ಹಲವು ಬಾರಿ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿಗೂ ಸಹಕರಿಸಿದ್ದಾರೆ.
ಹೀಗೆ ಟೀಮ್ ಇಂಡಿಯಾದಲ್ಲಿ ನತದೃಷ್ಟ ಕ್ರಿಕೆಟಿಗನಾಗಿರುವ ದಿನೇಶ್ ಕಾರ್ತಿಕ್ ಐಪಿಎಲ್ ಟೂರ್ನಿಯಲ್ಲೂ ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಸದ್ಯ ಕೆಕೆಆರ್ ತಂಡದ ಪರ ಆಡುತ್ತಿರುವ ದಿನೇಶ್ ಕಾರ್ತೀಕ್ ನಾಯಕನಾಗಿ ಕೂಡ ತಂಡವನ್ನು ಮುನ್ನೆಡೆಸಿದ್ದರು. ಆದ್ರೆ 2020ರ ಐಪಿಎಲ್ ನ ಮಧ್ಯೆ ಕಳಪೆ ಫಾರ್ಮ್ ನಿಂದಾಗಿ ನಾಯಕತ್ವವನ್ನು ತ್ಯಜಿಸಿದ್ದರು.
ಹೀಗಾಗಿ ಕೆಕೆಆರ್ ತಂಡವನ್ನು ದಿನೇಶ್ ಕಾರ್ತೀಕ್ ಬದಲಾಗಿ ಇಂಗ್ಲೆಂಡ್ ಏಕದಿನ ನಾಯಕ ಇಯಾನ್ ಮೊರ್ಗಾನ್ ತಂಡವನ್ನು ಮನ್ನಡೆಸಿದ್ದರು.
2021ರ ಐಪಿಎಲ್ ನಲ್ಲೂ ಇಯಾನ್ ಮೊರ್ಗಾನ್ ನಾಯಕತ್ವದಲ್ಲಿ ಕೆಕೆಆರ್ ತಂಡ ಹೇಳಿಕೊಳ್ಳುವಂತತಹ ಪ್ರದರ್ಶನವನ್ನು ನೀಡಿರಲಿಲ್ಲ.
ಆಡಿರುವ ಏಳು ಪಂದ್ಯಗಳಲ್ಲಿ ಕೆಕೆಆರ್ ತಂಡ ಗೆದ್ದಿರುವುದು ಎರಡು ಪಂದ್ಯಗಳನ್ನು ಮಾತ್ರ. ಇನ್ನುಳಿದ ಐದು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಇದೀಗ 2021ರ ಐಪಿಎಲ್ ಪಂದ್ಯ ಸೆಪ್ಟಂಬರ್ -ಅಕ್ಟೋಬರ್ ನಲ್ಲಿ ಯುಎಇ ನಲ್ಲಿ ಮುಂದುವರಿಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ಐಪಿಎಲ್ ಫ್ರಾಂಚೈಸಿಗಳು ಕೂಡ ಈಗಾಗಲೇ ಸಿದ್ಧತೆ ನಡೆಸಿಕೊಳ್ಳುತ್ತಿವೆ.
ಆದ್ರೆ ಮುಂದುವರಿದ ಐಪಿಎಲ್ ನಲ್ಲಿ ಸ್ಟಾರ್ ವಿದೇಶಿ ಆಟಗಾರರು ಭಾಗವಹಿಸುವುದು ಅನುಮಾನವಾಗಿದೆ. ಹೀಗಾಗಿ ಇಯಾನ್ ಮೊರ್ಗಾನ್ ಕೂಡ ಆಡುವುದು ಸ ಂಶಯವಾಗಿದೆ. ಈಗಾಗಲೇ ಕೆಕೆಆರ್ ತಂಡದ ಪ್ಯಾಟ್ ಕಮಿನ್ಸ್ ಅವರು ಅಲಭ್ಯರಾಗುವುದಾಗಿ ಹೇಳಿದ್ದಾರೆ.
ಒಂದು ವೇಳೆ ಇಯಾನ್ ಮೊರ್ಗಾನ್ ಅಲಭ್ಯರಾದ್ರೆ ತಂಡವನ್ನು ಮುನ್ನಡೆಸುವುದು ಯಾರು ಅನ್ನೋ ಪ್ರಶ್ನೆ ಎದುರಾಗಿದೆ.
ಕೆಕೆಆರ್ ತಂಡದ ಈ ಚಿಂತೆಗೆ ದಿನೇಶ್ ಕಾರ್ತಿಕ್ ಉತ್ತರ ನೀಡಿದ್ದಾರೆ. ಕೆಕೆಆರ್ ತಂಡದ ಮ್ಯಾನೇಜ್ ಮೆಂಟ್ ಹೇಳಿದ್ರೆ ಕೆಕೆಆರ್ ತಂಡವನ್ನು ಮುನ್ನಡೆಸಲು ಸಿದ್ಧನಿದ್ದೇನೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಒಟ್ಟಿನಲ್ಲಿ ಕೆಕೆಆರ್ ತಂಡಕ್ಕೆ ದಿನೇಶ್ ಕಾರ್ತಿಕ್ ಮತ್ತೆ ನಾಯಕನಾಗುತ್ತಾರೋ ಅನ್ನೋದನ್ನು ಕಾದು ನೋಡಬೇಕಿದೆ .