ಕೋಲಾರ: ಯಾವುದೇ ಕಾರಣಕ್ಕೂ ಔಷಧಿಯ ಕೊರತೆಯಾಗಬಾರದು – ಡಿಸಿಎಂ
ಕೋಲಾರ: ಕೋಲಾರದಲ್ಲಿ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಸಮಸ್ಯೆ ಉಂಟಾಗಿ ಸೋಮವಾರ ರಾತ್ರಿ ನಾಲ್ವರು ಸಾವನ್ನಪ್ಪಿದ ಬೆನ್ನಲ್ಲೇ ಜಿಲ್ಲೆಗೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಯಾವುದೇ ಕಾರಣಕ್ಕೂ ಹೊರಗೆ ಭೇಟಿ ನೀಡುವ ಸಿಬ್ಬಂದಿ ಕೈಯ್ಯಲ್ಲಿ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಇವತ್ತು ಶೇ.80ರಿಂದ 90ರಷ್ಟು ಸೋಂಕಿತರು ಮನೆಗಳಲ್ಲಿಯೇ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಔಷಧಿ ಕೊರತೆ ಇರಬಾರದು. ಔಷಧಿಯ ಜತೆಗೆ ಅವರಿಗೆ ಅಗತ್ಯ ಮಾಹಿತಿಯನ್ನೂ ಕಾಲ ಕಾಲಕ್ಕೆ ಕೊಡುತ್ತಿರಬೇಕು ಎಂದು ತಾಕೀತು ಮಾಡಿದ್ದೇನೆಂದು ಡಿಸಿಎಂ ತಿಳಿಸಿದರು.
ಇದೇ ವೇಳೆ ಕೋಲಾರದಲ್ಲಿ ದಿನಕ್ಕೆ 1,400 ಜನರ ಸ್ಯಾಂಪಲ್ ಪರೀಕ್ಷೆ ನಡೆಯುತ್ತಿತ್ತು. ಇದುವರೆಗೂ ಇಲ್ಲಿ ʼಎʼ ಸಿಂಪ್ಟ್ಯಾಮಿಕ್ ಹೊಂದಿರುವವರ ಪರೀಕ್ಷೆಯನ್ನು ಮಾಡಲಾಗುತ್ತಿತ್ತು. ಇನ್ನು ಮುಂದೆ ರೋಗ ಲಕ್ಷಣ ಇರುವವರ ಸ್ಯಾಂಪಲ್ ಮಾತ್ರ ತೆಗೆದುಕೊಳ್ಳಿ ಎಂದು ಸೂಚಿಸಿದ್ದೇನೆ.
ದಿನಕೆ ಸರಾಸರಿ 300 ಜನರಿಗೆ ಪಾಸಿಟೀವ್ ಬರುತ್ತಿದೆ. ಸ್ಯಾಂಪಲ್ ಪಡೆಯುವುದರ ಜತೆಗೆ ಅಷ್ಟೇ ಬೇಗ ರಿಸಲ್ಟ್ ಕೂಡ ಕೊಡಬೇಕು. ಆಯಾ ದಿನ ಸಂಗ್ರಹ ಮಾಡಿದ ದಿನವೇ ರಿಸಲ್ಟ್ ಕೊಡಲೇಬೇಕು. ಬಾಕಿ ಉಳಿಸಿಕೊಳ್ಳಬಾರದು. ನನಗೆ ಸಿಕ್ಕಿದ ಮಾಹಿತಿ ಪ್ರಕಾರ 6,500 ಸ್ಯಾಂಪಲ್ ಬಾಕಿ ಇದೆ. ಅದನ್ನು ಕೂಡಲೇ ಕ್ಲಿಯರ್ ಮಾಡಬೇಕು. ಪಾಸಿಟೀವ್ ಬಂದ ಕೂಡಲೇ ಚಿಕಿತ್ಸೆ ಆರಂಭ ಮಾಡಬೇಕು ಎಂದು ನಿರ್ದೇಶನ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.