ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ ಆರ್ಯವರ್ಧನ್ ಗುರೂಜಿ ವಿರುದ್ಧ ರಾಕಿ ಭಾಯ್ ಅಭಿಮಾನಿಗಳು ಯುದ್ಧ ಸಾರಿದ್ದಾರೆ. ಕೆಜಿಎಫ್ ಸರಣಿಯ ಮೂಲಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಗುರೂಜಿ ನೀಡಿರುವ ಹೇಳಿಕೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯವೇನು
ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಆರ್ಯವರ್ಧನ್ ಗುರೂಜಿ, ಟಾಕ್ಸಿಕ್ ಸಿನಿಮಾ ಆವರೇಜ್ ಆಗಿ ಓಡಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಈ ಸಿನಿಮಾದಿಂದ ನಿರ್ಮಾಪಕರಿಗೆ ಅತಿ ದೊಡ್ಡ ಲಾಭವೇನೂ ಆಗುವುದಿಲ್ಲ. ಯಶ್ ಸಿನಿಮಾ ತರಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದಾರೆ, ಇದರಿಂದಾಗಿ ಜನರಲ್ಲಿದ್ದ ಕ್ರೇಜ್ ಕಮ್ಮಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಇಂದಿನ ಸಿನಿಮಾಗಳಲ್ಲಿ ಕಥೆಗಿಂತ ಮಾರ್ಕೆಟಿಂಗ್ ಗಿಮಿಕ್ ಮತ್ತು ಸೋಶಿಯಲ್ ಮೀಡಿಯಾ ಹೈಪ್ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಮೇಕಿಂಗ್ ಬಗ್ಗೆ ವ್ಯಂಗ್ಯವಾಡಿದ ಗುರೂಜಿ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ಸಿನಿಮಾದ ರನ್ ಟೈಮ್ ಬಗ್ಗೆ ಮಾತನಾಡಿದ ಗುರೂಜಿ, ಐದು ಗಂಟೆ ಸಮಯ ವ್ಯರ್ಥ ಮಾಡಿ ಸಿನಿಮಾ ನೋಡಲು ಗಟ್ಟಿಯಾದ ಕಥೆ ಇರಬೇಕು ಎಂದಿದ್ದಾರೆ. ಈಗಿನ ಕಮರ್ಷಿಯಲ್ ಸಿನಿಮಾಗಳಲ್ಲಿ ಎತ್ತಿನಗಾಡಿಯಲ್ಲೂ ಎಕೆ 47 ಗನ್ ಹಿಡಿದು ಶೂಟ್ ಮಾಡುತ್ತಾರೆ, ಅದಕ್ಕೂ ಇದಕ್ಕೂ ಏನು ಸಂಬಂಧ ಎಂದು ಕಿಂಡಲ್ ಮಾಡಿದ್ದಾರೆ. ಈ ಮಾತುಗಳು ಯಶ್ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ.
ಗುರೂಜಿ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು
ಬೇರೆಯವರ ಸಿನಿಮಾ ಭವಿಷ್ಯ ಹೇಳುವ ಗುರೂಜಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸರಿಯಾಗಿಯೇ ಜಾಡಿಸುತ್ತಿದ್ದಾರೆ. ನಿಮ್ಮ ಜಾತಕವೇ ನಿಮಗೆ ಸರಿಯಾಗಿ ಗೊತ್ತಿದ್ದರೆ ಬಿಗ್ ಬಾಸ್ ಮನೆಯಿಂದ ಅಷ್ಟು ಬೇಗ ಯಾಕೆ ಹೊರಬರುತ್ತಿದ್ದಿರಿ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆದ ಮೇಲೆ ಬಾಕ್ಸ್ ಆಫೀಸ್ ಧೂಳೀಪಟವಾಗುವುದನ್ನ ಕಣ್ಣಾರೆ ನೋಡಿ ಎಂದು ಅಭಿಮಾನಿಗಳು ಸವಾಲು ಹಾಕಿದ್ದಾರೆ.
ಟಾಕ್ಸಿಕ್ ಸಿನಿಮಾದ ಮೇಲಿದೆ ಭಾರಿ ನಿರೀಕ್ಷೆ
ಗೀತು ಮೋಹನ್ ದಾಸ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಅಂತಹ ದೊಡ್ಡ ತಾರಾಬಳಗವೇ ಇದೆ. ಆರ್ಯವರ್ಧನ್ ಗುರೂಜಿ ಅವರ ವಿವಾದಾತ್ಮಕ ಹೇಳಿಕೆಗಳ ನಡುವೆಯೂ ಚಿತ್ರದ ಮೇಲಿನ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅಂತಿಮವಾಗಿ ಯಶ್ ಅವರ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಾವ ಮಟ್ಟದ ದಾಖಲೆ ಬರೆಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ.








