ಅಥಣಿ ಪಟ್ಟಣದಲ್ಲಿ ಬೀದಿಗೆ ಬಿದ್ದ ಬಡವರ ಔಷಧಿ
ಬೆಳಗಾವಿ : ಒಂದು ಕಡೆ ಸರ್ಕಾರಿ ಅವ್ಯವಸ್ಥೆ ತಾಂಡವ ಆಡುತ್ತಿದೆ, ಇನ್ನೊಂದು ಕಡೆ ಆಸ್ಪತ್ರೆಗೆ ಬಂದ ಔಷಧಿಯನ್ನು ಸರಿಯಾಗಿ ಸದ್ಬಳಕೆ ಮಾಡದೆ ಬೇಕಾಬಿಟ್ಟಿ ಆಗಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ.
ಹೌದು ಇದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಾಟ್ ಫಾರ್ ಸೇಲ್ ಅಂತ ಬರೆದಿರುವ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಡ್ಯೂಲಂಟ್ ಫಾರ್ ದ ರೋಟಾ ವೈರಸ್ ವ್ಯಾಕ್ಸಿನ್ ನ ನೂರಕ್ಕೂ ಅಧಿಕ ಡೋಜ್ ಗಳನ್ನು ರಸ್ತೆ ಪಕ್ಕದಲ್ಲಿ ಸುರಿಯಲಾಗಿದೆ.
ಇನ್ನೂ ಅವಧಿ ಮೀರದ ಮತ್ತು ಸದ್ಬಳಕೆ ಆಗಬೇಕಿದ್ದ ಔಷಧಿಯನ್ನು ಹೀಗೆ ತಂದು ಸುರಿಯಲು ಕಾರಣ ಏನು ಅನ್ನೋದು ನಿಗೂಢವಾಗಿದೆ.
ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುವ ಜ್ವರ, ವಾಂತಿ, ಭೇಧಿ ,ಅತಿಸಾರಕ್ಕೆ ನೀಡುವ ಓರಲ್ ಔಷಧಿ ಇದಾಗಿದ್ದು ಬಳಕೆ ಮಾಡದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ಬರುವ ಔಷಧಿಗಳನ್ನು ಅಗತ್ಯ ಇರುವ ಬಡವರಿಗೆ ತಲುಪಿಸದೆ ಅಥವಾ ಯಾವುದಾದರೂ ಆಶಾ ಅಥವಾ ಅಂಗನವಾಡಿ ಕಾರ್ಯಕರ್ತೆ ಮಕ್ಕಳಿಗೆ ವಿತರಣೆ ಮಾಡದೆ ಹೀಗೆ ಎಸೆದುಹೋಗಿರಬಹುದು ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಇತ್ತೀಚೆಗಷ್ಟೇ ಡಿ ಸಿ ಎಮ್ ಲಕ್ಷ್ಮಣ ಸವದಿ ಅವರು ತಾಲ್ಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಬೆನ್ನಲ್ಲೆ ಈ ಘಟನೆ ನಡೆದಿರುವದು ತಾಲ್ಲೂಕು ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವದಕ್ಕೆ ಹಿಡಿದ ಕನ್ನಡಿಯಾಗಿದೆ.