ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂದೆ ಆಯ್ಕೆ – ಇಂದೇ ಪ್ರಮಾಣ ವಚನ
ಮಹರಾಷ್ಟ್ರದ ನೂತನ ಮುಖ್ಯಮಂತ್ರಯಾಗಿ ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂದೆ ಇಂದು ಸಂಜೆ ಅಧಿಕಾರ ವಹಿಸಲಿದ್ದಾರೆ.ಶಿವಸೇನೆ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಗುರುವಾರ ಹೇಳಿಕೆ ನೀಡಿದ್ದಾರೆ.
ದೇವೇಂದ್ರ ಫಡ್ನವಿಸ್ ಮತ್ತು ಏಕನಾಥ್ ಶಿಂಧೆ ಅವರು ರಾಜಭವನದಲ್ಲಿ ರಾಜ್ಯಪಾಲ ಬಿ ಎಸ್ ಕೋಶ್ಯಾರಿ ಅವರನ್ನು ಭೇಟಿ ಮಾಡಿದ ನಂತರ ಈ ನಾಟಕೀಯ ಬೆಳವಣಿಗೆ ನಡೆದಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಂಡಾಯಗಾರರ ಜೊತೆ ಮೈತ್ರಿ ಮಾಡಿಕೊಂಡು ಫಡ್ನವಿಸ್ ಮೂರನೇ ಬಾರಿಗೆ ಸಿಎಂ ಆಗುವುದು ಖಚಿತ ಎಂದು ಈ ಹಿಂದೆಯೇ ಪರಿಗಣಿಸಲಾಗಿತ್ತು.
ರಾತ್ರಿ 7.30ಕ್ಕೆ ರಾಜಭವನದಲ್ಲಿ ಶಿಂಧೆ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದು, ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿದ ನಂತರ ರಾಜಭವನ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಫಡ್ನವಿಸ್ ತಿಳಿಸಿದರು.
ಫಡ್ನವಿಸ್ ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ದ್ರೋಹ ಬಗೆಯುವುದಿಲ್ಲ ಎಂದು ಶಿಂಧೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಿಂಧೆ ಅವರ ಗುಂಪಿಗೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಫಡ್ನವಿಸ್ ಹೇಳಿದ್ದಾರೆ.