ವಿಜಯಪುರ: ಕೊರೊನಾ ಸೋಂಕಿತರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಕುಟುಂಬದ ನೆರವಿಗೆ ವಿಜಯಪುರ ಜಿಲ್ಲಾಡಳಿತ ಧಾವಿಸಿದೆ.
ವಿಜಯಪುರ ನಗರದ ಚಾಲುಕ್ಯ ನಗರದ ಕುಟುಂಬವೊಂದರ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಮೊದಲ ಮಹಡಿಯಲ್ಲಿ ಹೋಂ ಐಸೋಲೇಶನ್ ಮಾಡಲಾಗಿತ್ತು. ಆದರೆ, ನೆಲ ಮಹಡಿಯಲ್ಲಿ ವಾಸವಿದ್ದ ಕುಟುಂಬದ ಇತರ ಸದಸ್ಯರ ಕೆಲಸಕ್ಕೆ ನೆರೆ ಹೊರೆಯವರು ಅಡ್ಡಿ ಮಾಡುತ್ತಿದ್ದಾರೆ. ಮನೆಗೆ ಹಾಲು, ಪೇಪರ್ ಹಾಕಲು, ಮನೆ ಕೆಲಸಗಾರರಿಗೆ ಅಡಚಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಕುಟುಂಬದವರು, ಪ್ರಧಾನಿ ಕಚೇರಿ, ಸಿಎಂ ಬಿಎಸ್ವೈ, ವಿಜಯಪುರ ಡಿಸಿಗೆ ಟ್ವೀಟರ್ ಮೂಲಕ ದೂರು ನೀಡಿದ್ದರು.
ವಿಷಯ ಗಂಭೀರಾವಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ವಿಜಯಪುರ ಜಿಲ್ಲಾಡಳಿತ ಸೋಂಕಿತನ ಕುಟುಂಬಕ್ಕೆ ಧೈರ್ಯ ತುಂಬಿ ಸಹಕಾರದ ಭರವಸೆ ನೀಡಿದೆ.
ಕೊರೊನಾ ಸೋಂಕಿತರ ಕುಟುಂಬಕ್ಕೆ ಅಗತ್ಯ ಸೇವೆ ನಿರಾಕರಣೆ ಸರಿಯಲ್ಲ, ಈ ಕುರಿತು ನಮಗೆ ಆ ಕುಟುಂಬದಿಂದ ದೂರು ಬಂದಿದೆ. ಮಹಾನಗರ ಪಾಲಿಕೆ ಆಯುಕ್ತರಿಗೆ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಬಡಾವಣೆ ಜನ ತೊಂದರೆ ಮಾಡದೆ ಸಹಕರಿಸಬೇಕು. ಇಲ್ಲದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕೊರೊನಾ ಸೋಂಕಿತನ ಮನೆಗೆ ಮಹಾನಗರ ಪಾಲಿಕೆ ಆಯುಕ್ತ ಹರ್ಷಾಶೆಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ರು.
ಕುಟುಂಬದವರು ಗಾಬರಿಪಡುವ ಅಗತ್ಯವಿಲ್ಲ. ತರಕಾರಿ, ಔಷಧ, ಪಡಿತರ ನೀಡಲಾಗುತ್ತದೆ. ಸ್ಥಳಿಯರು ಕೂಡ ಸಹಾಯ ಮಾಡಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.