ದಾವಣಗೆರೆ ಜಿಲ್ಲೆಯಲ್ಲಿ ಮಳೆ ಅಭಾವ ಎದುರಾಗಿರುವುದರಿಂದ ಇಲ್ಲಿನ ರೈತರು ಕಂಗಾಲಾಗಿದ್ದಾರೆ. ಮಳೆಯಿಲ್ಲದೆ ಹೈರಾಣಾಗಿರುವ ರೈತರು ಸಾಲ ಮಾಡಿ ಬೆಳೆದಿರುವ ಬೆಳೆಗಳು ಹಾಳಾಗಿವೆ.
ಭಾನುಹಳ್ಳಿಯಲ್ಲಿ ಸುಮಾರು 1200 ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ನೆಲಕಚ್ಚಿದ್ದು, ಟ್ರ್ಯಾಕ್ಟರ್ ಹರಿಸಿ ರೈತರು ನಾಶಪಡಿಸಿದ್ದಾರೆ. ಹಿಂದಿನ ತಿಂಗಳು ಧಾರಾಕಾರವಾಗಿ ಸುರಿದಿದ್ದ ಮಳೆ ಸದ್ಯ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ರೈತರು ತಲೆ ಮೇಲೆ ಕೈ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಹರಿಹರ ತಾಲೂಕಿನ ಭಾನುಹಳ್ಳಿಯಲ್ಲಿ ಬೆಳೆದಿದ್ದ ಮೆಕ್ಕೋಜಳ ಒಣಗಿ ಹೋಗಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಅಸಹಾಯಕರಾಗಿದ್ದಾರೆ. ಬೆಳೆ ಸಂಪೂರ್ಣವಾಗಿ ಒಣಗಿ ಹಳದಿ ಬಣಕ್ಕೆ ತಿರುಗಿದ್ದರಿಂದ ದಿಕ್ಕು ತೋಚದೆ ಟ್ರ್ಯಾಕ್ಟರ್ ಹರಿಸಿದ್ದಾರೆ. ರೈತ ಗುರುಮೂರ್ತಿ ಒಂದು ಎಕೆರೆಗೆ 25 ಸಾವಿರದಂತೆ ಖರ್ಚು ಮಾಡಿ ಮೆಕ್ಕೆ ಜೋಳ ಬೆಳೆದಿದ್ದರು. ಮೆಕ್ಕೆ ಜೋಳ ಫಸಲು ಕೈ ಸೇರುವ ಹಂತದಲ್ಲಿ ಈಗ ಮಳೆ ಕೈ ಕೊಟ್ಟಿದೆ.
1200 ಎಕರೆ ಪ್ರದೇಶದಲ್ಲಿ ಮೆಕ್ಕೆ ಜೋಳ ನೆಲಕಚ್ಚಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ರೈತರು ಆರೋಪಿಸಿದ್ದಾರೆ. ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.