ತುಮಕೂರು : ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಬೈಕ್ ತೆಗೆಯಲು ಹೇಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಮೇಲೆ ಅನ್ಯಜಾತಿಯ ಪುಂಡ ಯುವಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ
ಅಂಗಡಿಗೆ ಅಡ್ಡಲಾಗಿ ನಿಲ್ಲಿಸಿದ್ದ ಬೈಕ್ ತೆಗೆಯಲು ಹೇಳಿದ್ದಕ್ಕೆ ಮಲ್ಲನಾಯಕನಹಳ್ಳಿ ಗ್ರಾಮದ ದಲಿತ ಯುವಕ ಮೂರ್ತಿ ಎಂಬಾತನಿಗೆ ಪಕ್ಕದ ಗೊಲ್ಲರಹಟ್ಟಿ ಗ್ರಾಮದ ಯುವಕರು ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ರಾತ್ರಿ ಮನೆಗೆ ನುಗ್ಗಿದ ಯುವಕರ ಗುಂಪು ಮನೆಯ ಪಾತ್ರೆ ಪಗಡೆಗಳನ್ನ ಬೀದಿಗೆಸೆದು ರೌಡಿಗಳಂತೆ ವರ್ತಿಸಿದ್ದಾರೆ ಎಂದು ಮೂರ್ತಿ ಆರೋಪಿಸಿದ್ದಾರೆ.
ಇನ್ನು ಘಟನೆ ಬಳಿಕ ಮಲ್ಲನಾಯಕನಹಳ್ಳಿ ಗ್ರಾಮಸ್ಥರು ಮಿಡಿಗೇಶಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.