ಧಾರವಾಡ : ವ್ಯಕ್ತಿಯೊಬ್ಬ ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 8 ರಂದು ಧಾರವಾಡ (Dharwad) ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಈ ಘಟನೆ ನಡೆದಿದೆ. ಹಲ್ಲೆ ಮಾಡಿರುವ ಯುವಕ ಹಾಗೂ ಯುವತಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಹೋಗಿದ್ದರು. ಆಗ ಇಬ್ಬರ ಮಧ್ಯೆ ಜಗಳವಾಗಿತ್ತು. ಇದು ವಿಕೋಪಕ್ಕೆ ತೆರಳಿ, ಯುವಕ ಕಟರ್ ನಿಂದ ಇರಿದಿದ್ದ.
ಬಿ.ಬಿ ನಿಸ್ಬಾ ಡಂಬಳ (20) ಹಲ್ಲೆಗೊಳಗಾದ ಯುವತಿ. ಆರೋಪಿ ಇಮಾಮಜಾಫರ್ ಯುವತಿಯ ಕುತ್ತಿಗೆ ಹಾಗೂ ಕೈಗೆ ಇರಿದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಹಲ್ಲೆಯಾದ ನಂತರ ಯುವತಿ ಸ್ಥಳೀಯರಿಗೆ ಸಿಕ್ಕಿದ್ದು, ಪೊಲೀಸರನ್ನು ಕರೆಯಿಸಿದ್ದಾರೆ. ನಂತರ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ, ಮಾಹಿತಿ ಆಧಾರದ ಮೇಲೆ ಧಾರವಾಡ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕನನ್ನು ಧಾರವಾಡ ಕುರಬರ ಓಣಿಯ ನಿವಾಸಿ ಎನ್ನಲಾಗಿದೆ. ಯುವತಿ ಇತ್ತೀಚೆಗೆ ಬೇರೆ ಯುವಕನೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿ ಬಂಧಿಸಿ, ಜೈಲಿಗಟ್ಟಿದ್ದಾರೆ.