ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಮನನೊಂದು ಚಲನಚಿತ್ರ ಹಿನ್ನೆಲೆ ಗಾಯಕಿ ಸುಶ್ಮಿತಾ ಇಂದು ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ನಾಗರಭಾವಿಯಲ್ಲಿ ಘಟನೆ ನಡೆದಿದ್ದು, ನೇಣಿಗೆ ಶರಣಾಗುವುದಕ್ಕೂ ಮುನ್ನ ಸುಶ್ಮಿತಾ ಅವರು ತಮ್ಮ ತಾಯಿ ಹಾಗೂ ತಮ್ಮನಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ.

ಅಮ್ಮ, ನನ್ನನ್ನು ಕ್ಷಮಿಸು. ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನ ಸಾವಿಗೆ ಶರತ್ ಹಾಗೂ ವೈದೇಹಿ, ಗೀತಾ ನೇರವಾಗಿ ಕಾರಣ. ಶರತ್ ಅವರ ದೊಡ್ಡಮ್ಮನ ಮಾತು ಕೇಳಿಕೊಂಡು ಹಿಂಸೆ ನೀಡುತ್ತಿದ್ದರು. ಮನೆ ಬಿಟ್ಟು ಹೋಗು ಅಂತಿದ್ದರು. ಮಾನಸಿಕವಾಗಿ ತುಂಬ ಚಿತ್ರ ಹಿಂಸೆ ಕೊಟ್ಟಿದ್ದಾರೆ. ಅವರನ್ನೆಲ್ಲ ಸುಮ್ಮನೆ ಬಿಡಬೇಡ ಎಂದು ಸುಶ್ಮಿತಾ ಅವರು ಸಂದೇಶ ಕಳುಹಿಸಿದ್ದಾರೆ.
ಮಗಳ ಸಂದೇಶದ ಆಧಾರದ ಮೇಲೆ ಸುಶ್ಮಿತಾ ಪೋಷಕರು, ಅನ್ನಪೂಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಾಲು-ತುಪ್ಪ, ಶ್ರೀಸಾಮಾನ್ಯ ಮತ್ತಿತರ ಸಿನಿಮಾಗಳಲ್ಲಿ ಸುಶ್ಮಿತಾ ಹಾಡಿದ್ದರು.








