ನವದೆಹಲಿ: ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಹಲವೆಡೆ ಮತದಾರರು ಉತ್ತಮವಾಗಿ ಸ್ಪಂದಿಸಿ, ತಮ್ಮ ಹಕ್ಕು ಚಲಾಯಿಸಿದ್ದಾರೆ.
ಈ ಬಾರಿ ಯುವ ಜನತೆ ಕೂಡ ಖುಷಿಯಿಂದಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮೊದಲ ಹಂತದಲ್ಲಿ 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಆಶ್ಚರ್ಯ ಎನ್ನುವಂತೆ ನಾಗಲ್ಯಾಂಡ್ ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ ನಡೆದ ಕುರಿತು ಒರದಿಯಾಗಿದೆ. 20 ಶಾಸಕರು ಸೇರಿದಂತೆ 4 ಲಕ್ಷ ಮತದಾರರು ಮತಗಟ್ಟೆಗೆ ಹಕ್ಕು ಚಲಾಯಿಸಲು ಬಂದಿಲ್ಲ. ನಾಗಾ ಬುಡಕಟ್ಟಿನ ಜನ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದಾರೆ ಎನ್ನಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಅಲ್ಲಲ್ಲಿ ಹಿಂಸಾಚಾರ ನಡೆದ ಕುರಿತು ವರದಿಯಾಗಿವೆ. ಮಣಿಪುರದಲ್ಲಿ ಮತಗಟ್ಟೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಹೀಗಾಗಿ ಮತದಾರರು ಹೆದರಿ ಓಡಿ ಹೋಗಿದ್ದಾರೆ. ಬಂಗಾಳದ ಚಂದ್ಮರಿ, ಕೂಚ್ಬೆಹಾರ್ನಲ್ಲಿ ಕಲ್ಲು ತೂರಾಟ ನಡೆದಿದೆ. ದಿನ್ಹಟಾದಲ್ಲಿ ಟಿಎಂಸಿ ಕಾರ್ಯಕರ್ತರು ಬಾಂಬ್ ಎಸೆದಿದ್ದಾರೆ. ಛತ್ತಿಸ್ಘಡದ ಬಿಜಾಪುರ್ನಲ್ಲಿ ಮತಗಟ್ಟೆ ಸಮೀಪ ಗ್ರೆನೇಡ್ ಸ್ಫೋಟಗೊಂಡಿದೆ. ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಈ ಅಹಿತಕರ ಘಟನೆಗಳ ಮಧ್ಯೆಯೂ ಉಳಿದೆಡೆ ಶಾಂತವಾಗಿ ಮತದಾನ ನಡೆದಿದೆ. ಒಟ್ಟಾರೆ, 8 ಕೇಂದ್ರ ಸಚಿವರು ಸೇರಿದಂತೆ 1,625 ಅಭ್ಯರ್ಥಿಗಳ ಭವಿಷ್ಯವನ್ನು ಮತಯಂತ್ರದಲ್ಲಿ ಮತದಾರರು ಭದ್ರ ಪಡಿಸಿದ್ದಾರೆ.