ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ ಗೆ ಅವಿರೋಧವಾಗಿ ಆಯ್ಕೆ ಆಗಿರುವ ಬಿಜೆಪಿಯ ಎಂಟಿಬಿ ನಾಗರಾಜ್, ಪ್ರತಾಪ್ ಸಿಂಹ ನಾಯ್ಕ್.ಕೆ, ಆರ್ ಶಂಕರ್ ಮತ್ತು ಸುನೀಲ್ ವಲ್ಯಾಪುರ್ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಶುಕ್ರವಾರದಿಂದು ಈ ನಾಲ್ವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿನಾಂಕ 03-07-2020ರಂದು 12.15ಕ್ಕೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತ ನಿಗಧಿಯಾಗಿದೆ. ಈ ಮೂಲಕ ಕರ್ನಾಟಕ ವಿಧಾನ ಪರಿಷತ್ ನಿಂದ ವಿಧಾನಸಭೆಗೆ ಬಿಜೆಪಿಯ ನಾಲ್ವರು ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜ್ಯದಲ್ಲಿ ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಬಿಜೆಪಿಯಿಂದ ನಾಲ್ವರು, ಕಾಂಗ್ರೆಸ್ ನಿಂದ ಇಬ್ಬರು ಹಾಗೂ ಜೆಡಿಎಸ್ ನಿಂದ ಒಬ್ಬರು ಸ್ಪರ್ಧೆಗಿಳಿದಿದ್ದರು. ಏಳು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಚುನಾವಣೆಗೆ ನಿಂತ ಪರಿಣಾಮ, ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇತ್ತ ಬಿಜೆಪಿಯಿಂದ ಎಂಟಿಬಿ ನಾಗರಾಜ್, ಪ್ರತಾಪ್ ಸಿಂಹ ನಾಯ್ಕ್, ಆರ್ ಶಂಕರ್ ಮತ್ತು ಸುನೀಲ್ ವಲ್ಯಾಪುರ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಿಂದ ನಜೀರ್ ಅಹ್ಮದ್, ಬಿ.ಕೆ ಹರಿಪ್ರಸಾದ್, ಜೆಡಿಎಸ್ ಎಂಎಲ್ ಸಿ ಗೋವಿಂದ್ ರಾಜು ಎಂಎಲ್ ಸಿ ಆಗಿದ್ದಾರೆ.