ಢಾಕಾ: ಬಾಂಗ್ಲಾದೇಶದಲ್ಲಿ (Bangladesh Crisis) ಹಿಂಸಾಚಾರ ಇನ್ನೂ ಹತೋಟಿಗೆ ಬರುತ್ತಿಲ್ಲ. ಈಗಾಗಲೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಶೇಖ್ ಅಹ್ಮದ್ ಪಲಾಯನ ಮಾಡಿದ್ದಾರೆ. ಈ ಮಧ್ಯೆ ವಿದೇಶಾಂಗ ಸಚಿವರು ಪಲಾಯನಕ್ಕೆ ಯತ್ನಿಸಿ ಅರೆಸ್ಟ್ ಆಗಿದ್ದಾರೆ.
ಉದ್ವಿಗ್ನತೆ ಸೃಷ್ಟಿಯಾಗಿರುವ ಹೊತ್ತಲ್ಲೇ ಬಾಂಗ್ಲಾದೇಶದ ಮಾಜಿ ವಿದೇಶಾಂಗ ಸಚಿವ ಹಸನ್ ಮಹಮೂದ್ (Hassan Mahmud) ಅರೆಸ್ಟ್ ಆಗಿದ್ದಾರೆ. ಮಾಜಿ ಸಚಿವರನ್ನು ಢಾಕಾದ ಹಜರತ್ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಮಾಹಿತಿ ಮತ್ತು ಪ್ರಸಾರ ಮಾಜಿ ಸಚಿವ ಜುನೈದ್ ಅಹ್ಮದ್ ಪಾಲಕ್ ನ್ನು ಕೂಡ ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳು ಪಾಲಕ್ ದೇಶವನ್ನು ತೊರೆಯುವುದನ್ನು ನಿರ್ಬಂಧಿಸಿದ್ದಾರೆ. ಅವಾಮಿ ಲೀಗ್ ನಾಯಕ ದೆಹಲಿಗೆ ಪಲಾಯನ ಮಾಡಲು ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ಅವರಿಗೆ ವಿಮಾನ ಹತ್ತಲು ಅನುಮತಿ ನೀಡಿಲ್ಲ. ಈ ವೇಳೆ ಅವರನ್ನು ಬಂಧಿಸಲಾಗಿದೆ.
ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಮುಖಂಡರೊಂದಿಗೆ ಅಧ್ಯಕ್ಷರು ನಡೆಸಿದ ಚರ್ಚೆಯ ನಂತರ ಸಂಸತ್ತನ್ನು ವಿಸರ್ಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಸಾಂಪ್ರದಾಯಿಕ ಎದುರಾಳಿ ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಒಂದು ದಿನದ ನಂತರ ಜಿಯಾ ಬಿಡುಗಡೆಯಾಗಿದ್ದಾರೆ.