ಬಾಂಗ್ಲಾದೇಶದಿಂದ ಸ್ಥಳಾಂತರಿಸಲ್ಪಟ್ಟ 63 ಹಿಂದೂ ಕುಟುಂಬ ಯೋಗಿ ಸರ್ಕಾರದಿಂದ ಆಶ್ರಯ
1970 ರಲ್ಲಿ ಪೂರ್ವ ಪಾಕಿಸ್ತಾನ(ಬಾಂಗ್ಲಾದೇಶ) ದಿಂದ ಭಾರತಕ್ಕೆ ಸ್ಥಳಾಂತರಿಸಲ್ಪಟ್ಟಿದ್ದ 63 ಹಿಂದೂ ಬಂಗಾಳಿ ಕುಟುಂಬಗಳಿಗೆ ‘ಮುಖ್ಯಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ ಮನೆ ಪತ್ರದ ಜೊತೆಗೆ ಕೃಷಿ ಭೂಮಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ನೀಡಿದ್ದಾರೆ.
ಇಂದು ಲೋಕಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, 38 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. 1970ರಲ್ಲಿ, ಪೂರ್ವ ಪಾಕಿಸ್ತಾನದಿಂದ 407 ಕುಟುಂಬಗಳು ಭಾರತಕ್ಕೆ ಬಂದವು. ಕೆಲವು ಕುಟುಂಬಗಳಿಗೆ ದೇಶದ ವಿವಿಧ ಭಾಗಗಳಲ್ಲಿ ಪುನರ್ವಸತಿ ಕಲ್ಪಿಸಲಾಯಿತು. 65 ಕುಟುಂಬಗಳು ಪುನರ್ವಸತಿಗಾಗಿ ಕಾಯುತ್ತಿದ್ದವು. ಆ ಪೈಕಿ 63 ಕುಟಂಬಗಳಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಇನ್ನೂ ಎರಡು ಕುಟುಂಬಗಳು ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಹೇಳಿದರು.
‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಎಕರೆ ಕೃಷಿ ಭೂಮಿ ಹಾಗೂ ವಸತಿಗಾಗಿ 200 ಮೀಟರ್ ಜಮೀನು ನೀಡಿದೆ. ಇದಲ್ಲದೇ ಮುಖ್ಯಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂ.ಗಳನ್ನು ನೀಡಲಾಗಿದೆ. ಪ್ರತಿ ಮನೆಗೆ ಶೌಚಾಲಯವನ್ನು ಒದಗಿಸಲಾಗುವುದು ಎಂದರು.







