ಜ್ಞಾನವಾಪಿ ಮಸೀದಿ ತೀರ್ಪು: ಸಮೀಕ್ಷೆ ಮುಂದುವರಿಸಿ, ಮೇ 17 ರೊಳಗೆ ವರದಿ ಸಲ್ಲಿಸಿ – ಯುಪಿ ಕೋರ್ಟ್…
ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ವಾರಣಾಸಿ ಸ್ಥಳೀಯ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಮೇ 17ರ ಒಳಗಡೆ ಜ್ಞಾನವಾಪಿ ಮಸೀದಿ ಸಮೀಕ್ಷೆಯನ್ನ ಪೂರ್ಣಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಅಷ್ಟೇ ಅಲ್ಲದೇ ಸಮೀಕ್ಷೆ ನಡೆಸಲಿರುವ ಆಯುಕ್ತರನ್ನು ಬದಲಾಯಿಸಬಾರದು ಮತ್ತು ಮಸೀದಿಯ ನೆಲಮಹಡಿಯನ್ನು ತರೆಯಬೇಕು. ಸರ್ವೆ ಕಾರ್ಯಕ್ಕೆ ಅಡ್ಡಿ ಮಾಡಿದರೆ ಜಿಲ್ಲಾಡಳಿತ ಎಫ್ಐಆರ್ ಹಾಕಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗೆ ಸಮೀಕ್ಷೆ ನಡೆಸಬಹುದೇ ಎಂಬ ಅರ್ಜಿಯನ್ನು ಆಲಿಸಿದ ನ್ಯಾಯಾಲಯ, ನೆಲಮಾಳಿಗೆ ಸೇರಿದಂತೆ ಇಡೀ ಪ್ರದೇಶವನ್ನು ಸರ್ವೆ ಮಾಡಿ ವೀಡಿಯೊಗ್ರಾಫ್ ಮಾಡಬೇಕು ಎಂದು ತೀರ್ಪು ನೀಡಿದೆ. ಅಜಯ್ ಮಿಶ್ರಾ ಅವರೊಂದಿಗೆ ವಿಶಾಲ್ ಕುಮಾರ್ ಸಿಂಗ್ ಅವರನ್ನ ನ್ಯಾಯಾಲಯ ನೇಮಿಸಿದೆ.
ಈ ಹಿಂದೆ ಮೇ 10ರೊಳಗೆ ವರದಿ ಸಲ್ಲಿಸುವಂತೆ ಸ್ಥಳೀಯ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿತ್ತು.
ಕಳೆದ ಶುಕ್ರವಾರ, ನ್ಯಾಯಾಲಯ ನೇಮಿಸಿದ ಸಮಿತಿಯು ಮಸೀದಿ ಸಂಕೀರ್ಣದ ಸಮೀಕ್ಷೆ ಮತ್ತು ವೀಡಿಯೋಗ್ರಫಿಯನ್ನು ಮಾಡಲು ಮಸೀದಿ ಪ್ರವೇಶಿಸದಂತೆ ಮಸೀದಿ ಆಡಳಿತ ಮತ್ತು ಮುಸ್ಲಿಂರು ಪ್ರತಿಭಟನೆ ನಡೆಸಿದ್ದರು.
ಇದಕ್ಕೂ ಮೊದಲು, ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ಹೊರ ಗೋಡೆಯ ಮೇಲೆ ಇರುವ ಹಿಂದೂ ದೇವತೆಗಳ ದೈನಂದಿನ ಪೂಜೆಗೆ ಅನುಮತಿ ಕೋರಿ ದೆಹಲಿ ಮೂಲದ ಐವರು ಮಹಿಳೆಯರು ಮಾಡಿದ ಮನವಿಯ ಮೇಲೆ ವಿಡಿಯೋಗ್ರಾಫಿಕ್ ಸಮೀಕ್ಷೆಗೆ ಆದೇಶಿಸಿತ್ತು.