ಗದಗ: ಕೊರೋನಾ ಸಂದರ್ಭದಲ್ಲಿಯೇ ಅಧಿಕಾರ ವಹಿಸಿಕೊಂಡ ಕೇವಲ ಮೂರು ತಿಂಗಳಿನಲ್ಲಿಯೇ ಸಹಕಾರ ಇಲಾಖೆಯ ಮಹತ್ವವನ್ನು ಸಚಿವ ಎಸ್.ಟಿ ಸೋಮಶೇಖರ್ ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಸಹಕಾರ ಸಚಿವ ಎಚ್.ಕೆ.ಪಾಟೀಲ್ ಗುಣಗಾನ ಮಾಡಿದ್ದಾರೆ.
ಗದಗ್ನಲ್ಲಿ ಸಹಕಾರ ಇಲಾಖೆ ವತಿಯಿಂದ ಆಯೋಜಿಸಿದ್ದ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್.ಕೆ ಪಾಟೀಲ್, ಸಹಕಾರಿ ಕ್ಷೇತ್ರದಲ್ಲಿ ಒಬ್ಬ ಮಂತ್ರಿ ಸಹಕಾರಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಯಾವ ರೀತಿ ಕೆಲಸವನ್ನು ಮಾಡಬಹುದು ಎಂಬುದನ್ನು ಅತ್ಯಲ್ಪ ಅವಧಿಯಲ್ಲಿ ಮಾಡಿ ತೋರಿಸಿದ್ದಾರೆ. ಎಲ್ಲ ಸಹಕಾರಿಗಳಿಗೆ ಈ ಮೂಲಕ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಎಸ್.ಟಿ ಸೋಮಶೇಖರ್ ಕೊರೊನಾ ಸಂದರ್ಭದಲ್ಲಿಯೂ ಜಿಲ್ಲಾಪ್ರವಾಸ ಮಾಡಿ ರಚನಾತ್ಮಕ ಕೆಲಸ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ನಾಗರಿಕರನ್ನು ಪ್ರೋತ್ಸಾಹ ಮಾಡುತ್ತಾ ಸಹಕಾರ ವಲಯವನ್ನು ಸಕ್ರಿಯವಾಗಿಟ್ಟಿದ್ದಾರೆ ಎಂದರು.
ಎಲ್ಲರೂ ಮನೆಯಲ್ಲಿ ಬಾಗಿಲು ಹಾಕಿ ಕುಳಿತ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ದಿಟ್ಟತನದಿಂದ ಮನೆ ಮನೆಗೆ ಹೋಗಿ ಸೇವೆ ಸಲ್ಲಿಸಿದ್ದು ನಿಜಕ್ಕೂ ಅಭಿನಂದನೀಯ ಎಂದು ಎಚ್.ಕೆ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರು ಸ್ವಾಭಿಮಾನಿಗಳಿದ್ದು, ಅವರಿಗೆ ಸಾಲ ಕೊಟ್ಟರೆ ನೂರಕ್ಕೆ ನೂರು ಮರುಪಾವತಿಯಾಗಲಿದೆ. ಹಾಗಾಗಿ ಅವರಿಗೆ ಸಹಕಾರ ವಲಯದಿಂದ ಶೂನ್ಯ ಬಡ್ಡಿ ದರದಲ್ಲಿ ಯಾವ ರೀತಿಯಾಗಿನ ಸಾಲ ಕೊಡಿಸಬಹುದು ಎಂಬುದನ್ನು ಜಾರಿಗೆ ತರುವ ಚಿಂತನೆ ಇದೆ. ಈ ಮೂಲಕ ಅವರನ್ನು ಆರ್ಥಿಕವಾಗಿ ಬಲಪಡಿಸುವ ಕಾರ್ಯಕ್ಕೆ ಕೈಹಾಕಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ರಾಮಣ್ಣ ಲಮಾಣಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಇತರರು ಇದ್ದರು.