ಐಪಿಎಲ್ ಇತಿಹಾಸದ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾದ 2008ರ ಕಪಾಳಮೋಕ್ಷ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸುಮಾರು 16 ವರ್ಷಗಳ ನಂತರ ಮಾಜಿ ವೇಗಿ ಶ್ರೀಶಾಂತ್ ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದು, ಹರ್ಭಜನ್ ಸಿಂಗ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಮೂಲಕ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಗೆಳೆತನದ ಮುಖವಾಡ ಕಳಚಿದ ಶ್ರೀಶಾಂತ್
ಈವರೆಗೆ ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ನಡುವೆ ಎಲ್ಲವೂ ಸರಿ ಇದೆ ಎಂದೇ ಭಾವಿಸಲಾಗಿತ್ತು. ಆದರೆ ಈಗ ಶ್ರೀಶಾಂತ್ ನೀಡಿರುವ ಹೇಳಿಕೆ ಹಳೆಯ ಗಾಯವನ್ನು ಮತ್ತೆ ಕೆದಕಿದೆ. ಹರ್ಭಜನ್ ಸಿಂಗ್ ಅವರು ಅಂದು ನಡೆದ ಘಟನೆಯನ್ನು ಸಾರ್ವಜನಿಕವಾಗಿ ಬಳಸಿಕೊಂಡು ಹಣ ಗಳಿಸುತ್ತಿದ್ದಾರೆ ಎಂದು ಶ್ರೀಶಾಂತ್ ಕಿಡಿಕಾರಿದ್ದಾರೆ. ಹರ್ಭಜನ್ ಅವರನ್ನು ನಾನು ನನ್ನ ಹಿರಿಯ ಸಹೋದರ ಎಂದು ಗೌರವಿಸಿದ್ದೆ, ಆದರೆ ಅವರು ಈ ಘಟನೆಯನ್ನು ವೈಭವೀಕರಿಸಿ ಬ್ಯುಸಿನೆಸ್ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಥೆ ಹೇಳಿ ಲಕ್ಷಾಂತರ ರೂಪಾಯಿ ಸಂಪಾದನೆ
ಮಾತೃಭೂಮಿ ಮಾಧ್ಯಮದೊಂದಿಗೆ ಮಾತನಾಡಿರುವ ಶ್ರೀಶಾಂತ್, ಹರ್ಭಜನ್ ಸಿಂಗ್ ಅವರು ವಿವಿಧ ಸಂದರ್ಶನಗಳು ಮತ್ತು ಕಾರ್ಯಕ್ರಮಗಳಲ್ಲಿ ಈ ಕಪಾಳಮೋಕ್ಷದ ಬಗ್ಗೆ ಮಾತನಾಡಿ ಸುಮಾರು 80 ಲಕ್ಷದಿಂದ 1 ಕೋಟಿ ರೂಪಾಯಿಯವರೆಗೆ ಹಣ ಗಳಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಇಷ್ಟು ದಿನ ಹರ್ಭಜನ್ ಅವರು ಸಾರ್ವಜನಿಕವಾಗಿ ಕೇಳಿದ ಕ್ಷಮೆಯಾಚನೆ ಕೇವಲ ನಟನೆ ಮತ್ತು ಪ್ರಚಾರದ ಭಾಗವಾಗಿತ್ತು ಎಂಬುದು ಶ್ರೀಶಾಂತ್ ಅವರ ವಾದವಾಗಿದೆ.
ಇನ್ನು ಮುಂದೆ ಯಾವುದೇ ಸಂಬಂಧವಿಲ್ಲ
ಈ ಘಟನೆಯಿಂದ ತಮಗೆ ಅತೀವ ನೋವಾಗಿದ್ದು, ಹರ್ಭಜನ್ ಸಿಂಗ್ ಜೊತೆಗಿನ ಎಲ್ಲಾ ಸ್ನೇಹ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ಶ್ರೀಶಾಂತ್ ಸ್ಪಷ್ಟಪಡಿಸಿದ್ದಾರೆ. ತಮ್ಮ ನೋವನ್ನು ಹರ್ಭಜನ್ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಅವರ ಮಾತುಗಳಲ್ಲಿ ಪ್ರಾಮಾಣಿಕತೆ ಇಲ್ಲ, ಕೇವಲ ಸ್ವಂತ ಲಾಭಕ್ಕಾಗಿ ಅವರು ಈ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಹರ್ಭಜನ್ ಅವರ ಪಶ್ಚಾತ್ತಾಪದ ಮಾತುಗಳು ಕೇವಲ ವ್ಯಾಪಾರೀಕರಣದ ಭಾಗವಾಗಿದೆ ಎಂಬುದು ಅವರ ಮುಖ್ಯ ಆರೋಪವಾಗಿದೆ.
ವಿವಾದದ ಹಿನ್ನೆಲೆ ಏನು?
2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಆವೃತ್ತಿಯ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ನಂತರ ಹರ್ಭಜನ್ ಸಿಂಗ್ ಅವರು ಶ್ರೀಶಾಂತ್ ಕೆನ್ನೆಗೆ ಬಾರಿಸಿದ್ದರು. ಈ ವೇಳೆ ಶ್ರೀಶಾಂತ್ ಮೈದಾನದಲ್ಲೇ ಕಣ್ಣೀರಿಟ್ಟ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದವು. ಇತ್ತೀಚೆಗಷ್ಟೇ ಹರ್ಭಜನ್ ಸಿಂಗ್ ಅವರು ಸಂದರ್ಶನವೊಂದರಲ್ಲಿ ಶ್ರೀಶಾಂತ್ ಮಗಳ ಬಗ್ಗೆ ಮಾತನಾಡಿದ್ದರು. ಅದರ ಬೆನ್ನಲ್ಲೇ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಈ ಘಟನೆಯ ವಿಡಿಯೋ ಹಂಚಿಕೊಂಡಿದ್ದು ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ಇಷ್ಟು ದಿನ ಈ ಬಗ್ಗೆ ತುಟಿಪಿಟಿಕ್ ಅನ್ನದ ಶ್ರೀಶಾಂತ್ ಈಗ ಸಿಡಿದೆದ್ದಿದ್ದಾರೆ. ಈ ಹೊಸ ಬೆಳವಣಿಗೆಯು ಭಾರತೀಯ ಕ್ರಿಕೆಟ್ನ ಇಬ್ಬರು ಮಾಜಿ ಆಟಗಾರರ ನಡುವಿನ ಮುನಿಸನ್ನು ಮತ್ತೆ ಬೀದಿಗೆ ತಂದಿದೆ.








