ಮುಂದಿನ GBA ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಜೋರಾಗಿದ್ದು, ಎಲ್ಲಾ ಪ್ರಮುಖ ಪಕ್ಷಗಳು ಈಗಾಗಲೇ ಚುನಾವಣಾ ತಯಾರಿಯಲ್ಲಿ ತೊಡಗಿಕೊಂಡಿವೆ. ಇದರ ಮಧ್ಯೆ, H. D. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕೂಡ ಸೈಲೆಂಟ್ ಆಗಿಯೇ ಭರ್ಜರಿ ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇತ್ತೀಚೆಗೆ ಹೆಚ್ಡಿಕೆ ಅವರು ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ, ಸಾಕಷ್ಟು ಹೊತ್ತು ಮಹತ್ವದ ರಾಜಕೀಯ ಚರ್ಚೆ ನಡೆಸಿದ್ದಾರೆ. ಈ ಭೇಟಿ ಇದೀಗ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಖಂಡ ಶ್ರೀನಿವಾಸ್ ಮೂರ್ತಿಯನ್ನು ಮತ್ತೆ JDS ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಹೆಚ್ಡಿಕೆ ವಿಶೇಷ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಅಖಂಡ ಶ್ರೀನಿವಾಸ್ರ ರಾಜಕೀಯ ಪ್ರಭಾವವನ್ನು ಬೆಂಗಳೂರು ಭಾಗದಲ್ಲಿ ಬಳಸಿಕೊಳ್ಳಲು JDS ನಾಯಕತ್ವ ತಂತ್ರ ರೂಪಿಸಿದ್ದು, ಮುಂಬರುವ GBA ಚುನಾವಣೆಯಲ್ಲಿ ಸಮುದಾಯ ಆಧಾರಿತ ಮತಗಳ ಲೆಕ್ಕಾಚಾರಕ್ಕೂ ಒತ್ತು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ಚರ್ಚೆ ಮಹತ್ವ ಪಡೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಅಖಂಡ ಶ್ರೀನಿವಾಸ್ ಮೂರ್ತಿ ನಮ್ಮ ಹಳೆಯ ಸ್ನೇಹಿತರು. ಅವರನ್ನು ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಶೀಘ್ರದಲ್ಲೇ ಬೃಹತ್ ಸಮಾವೇಶದ ಮೂಲಕ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ, ಎಂದು ತಿಳಿಸಿದ್ದಾರೆ.
ಇತ್ತ ರಾಜಕೀಯ ವಲಯದಲ್ಲಿ, GBA ಚುನಾವಣೆಗೆ ಮುನ್ನ JDS ತನ್ನ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನ ನಡೆಸುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಪ್ರಮುಖ ನಾಯಕರನ್ನು ಮತ್ತೆ ಪಕ್ಷದತ್ತ ಸೆಳೆಯುವ ಹೆಚ್ಡಿಕೆ ನಡೆ, ಮುಂದಿನ ರಾಜಕೀಯ ಸಮೀಕರಣಗಳಲ್ಲಿ ಮಹತ್ವ ಪಡೆಯುವ ಸಾಧ್ಯತೆ ಇದೆ.







