ಬೆಳಗಾವಿ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಅಕಾಲಿಕ ಮಳೆ ಸುರಿಯುತ್ತಿದ್ದು, ಹಲವೆಡೆ ಜನ – ಜೀವನ ಅಸ್ತವ್ಯಸ್ಥವಾಗಿದೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, ಅಲ್ಲಲ್ಲಿ ಅನಾನುಕೂಲತೆ ಉಂಟಾಗಿವೆ.
ಈಗಾಗಲೇ ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಭರ್ಜರಿ ಮಳೆಯಾಗುತ್ತಿತ್ತು. ಈಗ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿಯೂ (Kittur Karnataka region) ಸುರಿಯುತ್ತಿದೆ.
ಜಿಲ್ಲೆಯ ಕಾಗವಾಡ (Kagwada) ಮತ್ತು ರಾಯಬಾಗ (Raibagh) ತಾಲ್ಲೂಕುಗಳಲ್ಲಿ ಇಂದು ಮಧ್ಯಾಹ್ನದಿಂದಲೇ ಬಿರುಗಾಳಿಯೊಂದಿಗೆ ವ್ಯಾಪಕ ಮಳೆಯಾಗಿದೆ. ಎರಡೂ ಕಡೆಗಳಲ್ಲಿ ಆಲಿಕಲ್ಲು (hailstorm) ಮಳೆಯಾಗಿದೆ.
ಕಾಗವಾಡ ತಾಲೂಕಿನ ಮೊಳೆ, ಉಗಾರಖುರ್ದ್ ಮತ್ತು ಕಾಗವಾಡದಲ್ಲಿ ಭಾರಿ ಮಳೆಯಾಗಿದೆ. ಹಾಗೆಯೇ, ರಾಯಭಾಗ ತಾಲೂಕಿನ ಕುಡಚಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಮಳೆಯಾಗಿದೆ. ನಗರ ಪ್ರದೇಶದ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನರು ತೊಂದರೆ ಅನುಭವಿಸಿದರೆ, ಬಿತ್ತನೆಯ ಕಾರ್ಯಕ್ಕೆ ಮುಂದಾಗಿರು ರೈತ ಮಳೆರಾಯನಿಗೆ ನಮಿಸುತ್ತಿದ್ದಾನೆ.