ದಾವಣಗೆರೆ: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ದಾವಣಗೆರೆ ಜಿಲ್ಲೆಯಲ್ಲಿ ಭಾರಿ ಅವಾಂತರ ಸೃಷ್ಟಿಸಿದೆ. ಧಾರಾಕಾರ ಮಳೆಗೆ ಕಾರೊಂದು ನೀಡಿದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ದಾವಣಗೆರೆ ತಾಲೂಕಿನ ಭಾವಿಹಾಳ್ ಗ್ರಾಮದಲ್ಲಿ ನಡೆದಿದೆ.
ಜಲಾವೃತಗೊಂಡ ರಸ್ತೆ ಮೇಲೆ ಕಾರು ಚಾಲನೆ ಮಾಡಲು ಹೋದ ಪರಿಣಾಮ ದಾರಿ ಕಾಣದೆ ಕಾರು ಹಳ್ಳಕ್ಕೆ ಬಿದ್ದು ಕೊಚ್ಚಿಕೊಂಡು ಹೋಗಿದೆ. ಕಾರು ಹಳ್ಳಕ್ಕೆ ಬೀಳುತ್ತಿದ್ದಂತೆ ಕಾರಿನಿಂದ ಚಾಲಕ ಜಿಗಿದು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾನೆ.
ಜಗಳೂರು ತಾಲೂಕಿನಾದ್ಯಂತ ರಾತ್ರಿಯಿಡೀ ಉತ್ತಮ ಮಳೆಯಾಗಿದ್ದು, ಹಿರೇಮಲ್ಲನಹೊಳೆಯ ಹಳ್ಳಗಳು ತುಂಬಿ ಹರಿಯುತ್ತಿವೆ. ಹರಿಹರ ತಾಲೂಕಿನ ಸಂಕ್ಲಿಪುರ-ಗುಳ್ಳದಹಳ್ಳಿ ಗ್ರಾಮದ ನಡುವಿನ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿರುವ ಕಾರಣ ರಸ್ತೆ ದಾಟಲು ಜನರು ಹರಸಾಹಸ ಪಡುತ್ತಿದ್ದಾರೆ.
ದಾವಣಗೆರೆಯ ಮಾಯಕೊಂಡದ ಒಡೆಯರಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.