ಇವತ್ತು ಸಂಜೆಯೊಳಗೆ ಹೈಕಮಾಂಡ್ ಸಂದೇಶ : ಬಿಎಸ್ ವೈ
ಬೆಳಗಾವಿ : ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಇವತ್ತು ಸಂಜೆಯೊಳಗೆ ಹೈಕಮಾಂಡ್ ಸಂದೇಶ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ದೇವರ ದಯೆಯಿಂದ ನಿನ್ನೆ ಮತ್ತು ಇವತ್ತು ಮಳೆ ಕಡಿಮೆಯಾಗಿದೆ.
ಎರಡು ದಿನ ಮಳೆ ಕಡಿಮೆಯಾದಲ್ಲಿ ಎಲ್ಲವೂ ಸರಿಯಾಗಿದೆ. ಮಹಾರಾಷ್ಟ್ರದಲ್ಲಿಯೂ ಮಳೆ ಕಡಿಮೆಯಾಗಿದೆ.
ಅಲ್ಲಿ ಮಳೆ ಕಡಿಮೆಯಾಗಿರುವುದರಿಂದ ಪ್ರವಾಹ ಇಳಿಮುಖವಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಸೂಚನೆ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಹೈಕಮಾಂಡ್ ನಿಂದ ಸಂಜೆ ವೇಳೆಗೆ ಸಂದೇಶ ಬರಬಹುದು.
ಸಂದೇಶ ಬಂದರೆ ನಾನು ಹೇಳುತ್ತೇನೆ. ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮೇಲೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಇನ್ನು ದಲಿತ ಸಿಎಂ ಮಾಡುವ ಬಗ್ಗೆ ಕಾಂಗ್ರೆಸ್ ಸವಾಲ್ ಹಾಕಿದ ಬಗ್ಗೆ ಮಾತನಾಡಿ, ದಲಿತ ಮುಖ್ಯಮಂತ್ರಿ ಮಾಡುವುದು ನಾನಲ್ಲ, ಹೈಕಮಾಂಡ್.
ಇವತ್ತು ಸಂಜೆ ಹೈಕಮಾಂಡ್ ನಿಂದ ಯಾವ ಸಂದೇಶ ಬರಲಿದೆ ಎಂಬುದನ್ನು ನೋಡೋಣ ಎಂದು ತಿಳಿಸಿದ್ದಾರೆ.