ಧರ್ಮ ಸಂಘರ್ಷಕ್ಕೆ 6 ಜನ ವಿದ್ಯಾರ್ಥಿನಿಯರು ಕಾರಣ : ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ
ಕಲಬುರಗಿ: ಹಿಜಾಬ್ ಗಾಗಿ ಉಡುಪಿ ಕಾಲೇಜುವೊಂದರಲ್ಲಿ ಧ್ವನಿ ಎತ್ತಿದ 6 ವಿದ್ಯಾರ್ಥಗಳ ಮಾನಸಿಕ ಚಿಕಿತ್ಸೆ ಆಗಬೇಕಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಉಂಟಾದ ಧರ್ಮ ಸಂಘರ್ಷವೂ 6 ಜನರ ಪಾಪದ ಕೂಸು. ಹಿಜಾಬ್ ವಿಚಾರದಲ್ಲಿ 6 ವಿದ್ಯಾರ್ಥಿನಿಯರು ಉದ್ದೇಶಪೂರ್ವಕವಾಗಿ ವಿವಾದ ಹುಟ್ಟುಹಾಕಿದ್ದಾರೆ ಎಂದು ಹಿಜಾಬ್ ಧರಿಸಿ ಪರೀಕ್ಷೆಗೆ ಅವಕಾಶ ನೀಡುವಂತೆ 6 ವಿದ್ಯಾರ್ಥಿಗಳು ಮನವಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಅಲ್ಲದೇ ಇವರು ಶಾಲಾ ಮಂಡಳಿ, ಹೈಕೋರ್ಟ್ ಆದೇಶಗಳನ್ನು ಧಿಕ್ಕರಿಸಿ ವಿದ್ಯಾರ್ಥಿನಿಯರು ಹೋರಾಟ ಮಾಡಿದ್ದಾರೆ. ಈಗ ಹಿಜಾಬ್ ವಿವಾದ ಎದ್ದ ಮೇಲೆ ಕರ್ನಾಟಕದಲ್ಲಿ ನಡೆದ ಧರ್ಮಸಂಘರ್ಷಕ್ಕೆ ನಾವು ಕಾರಣವಲ್ಲ ಎನ್ನುತ್ತಿದ್ದಾರೆ ಹಾಗಾದರೆ ಮತ್ತಾರು ಕಾರಣ? ಎಂದು ಪ್ರಶ್ನಿಸಿದರು.
ಮುಂದುವರೆದು ಇವರ ಹಠದಿಂದಲೇ ರಾಜ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಹಲಾಲ್, ಆಜಾನ್ ಮತ್ತು ಮುಸ್ಲಿಂ ವ್ಯಾಪಾರಿಗಳ ಮೇಲಿನ ನಿರ್ಬಂಧಕ್ಕೂ ಈ ವಿದ್ಯಾರ್ಥಿಗಳೇ ಮೂಲ ಕಾರಣ. ಈ ವಿವಾದಗಳೆಲ್ಲವೂ ಇವರ ಪಾಪದ ಕೂಸುಗಳು. ಇವರ ಮೆದುಳಿಗೆ ಚಿಕಿತ್ಸೆ ಆಗಬೇಕಿದೆ ಎಂದು ಕಿಡಿಕಾರಿದರು.
ಇನ್ನೂ ಈ ವಿದ್ಯಾರ್ಥಿಗಳು ಭಯೋತ್ಪಾದಕರು, ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳ ಸೂಚನೆಗಳ ಪ್ರಕಾರವೇ ಈ ದೇಶ, ರಾಜ್ಯದಲ್ಲಿ ಹೋರಾಟ ಮಾಡಿದ್ದಾರೆ. ಒಂದು ವೇಳೆ ಸರ್ಕಾರ ಹೈಕೋರ್ಟ್ ಆದೇಶ ತಳ್ಳಿಹಾಕಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರೆ, ಅದು ಮೂರ್ಖತನದ ಪರಮಾವಧಿ ಆಗುತ್ತದೆ. ನ್ಯಾಯಾಂಗ ನಿಂದನೆಯೂ ಆಗುತ್ತದೆ. ಹಾಗಾಗಿ ಸರ್ಕಾರ ಹೈಕೋರ್ಟ್ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.