ಬೆಂಗಳೂರು: ಬೀದಿ ನಾಯಿ ಹುಡುಕಿ ಕೊಟ್ಟವರಿಗೆ ಭರ್ಜರಿ ಬಹುಮಾನ ಘೋಷಿಸಲಾಗಿದೆ.
ಇಲ್ಲಿಯ ಕುಮಾರಪಾರ್ಕ್ (Kumarapark) ಹತ್ತಿರ ನಾಪತ್ತೆಯಾಗಿರುವ 3 ಬೀದಿ ನಾಯಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. 4 ತಂಡಗಳಿಂದ ತೀವ್ರ ಶೋಧ ನಡೆಸಲಾಗುತ್ತಿದೆ. ನಾಪತ್ತೆಯಾದ ನಾಯಿಗಳನ್ನು ಹುಡುಕಿ ಕೊಟ್ಟವರಿಗೆ ಬರೋಬ್ಬರಿ 35 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.
ಕುಮಾರಪಾರ್ಕ್ ಹತ್ತಿರ ಕಳೆದ 10 ವರ್ಷದಿಂದ ಇದ್ದ ಈ 3 ಬೀದಿ ನಾಯಿಗಳನ್ನು ವಕೀಲೆ ವಿಪ್ಲವಿ ಮಹೇಂದ್ರ ಅವರು ಪೋಷಣೆ ಮಾಡುತ್ತಿದ್ದರು. ಸದ್ಯ ಇವರು ಇಂಗ್ಲೆಂಡ್ ನಲ್ಲಿರುವ ಹಿನ್ನೆಲೆಯಲ್ಲಿ ಅವರ ಕಚೇರಿ ಸಿಬ್ಬಂದಿಯಿಂದ ನಾಯಿಗಳ ಪೋಷಣೆ ಮಾಡಲಾಗುತ್ತಿತ್ತು. ಇನ್ನೂ ವಿಶೇಷ ಎಂದರೆ, ಈ ನಾಯಿಗಳಿಂದಲೇ ಈ ಪ್ರದೇಶದಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಲೋಬಿ, ದಂತ, ರಿಬಾ ಹೆಸರಿನ ಈ 3 ನಾಯಿಗಳು ಕಣ್ಮರೆಯಾಗಿವೆ.
ಹೀಗಾಗಿ ಈ ನಾಯಿಗಳಿಗಾಗಿ ಭಾರೀ ಹುಡುಕಾಟ ನಡೆಯುತ್ತಿದೆ. ಈ ಕುರಿತು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಚೇರಿ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ.ಪತ್ತೆಗೆ 4 ತಂಡಗಳಿಂದ ಶೋಧ ನಡೆಸಲಾಗುತ್ತಿದೆ. ಬೀದಿ ನಾಯಿಗಳ ಪೋಷಣೆ ಮಾಡುತ್ತಿದ್ದ ವಿಪ್ಲವಿ ಮಹೇಂದ್ರ ಅವರಿಂದಲೂ ಪ್ರತ್ಯೇಕ ತಂಡ ರಚಿಸಿ ಹುಡುಕಾಟ ನಡೆಸಲಾಗುತ್ತಿದೆ.