ಮುಂಬರುವ 2024 ರ ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸಿದ್ದವಾಗುತ್ತಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ 2024 ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿವೆ. ಬಿಜೆಪಿ ಮುಂಬರುವ ಲೋಸಭಾ ಚುನಾವಣೆಯಲ್ಲಿ ಮತ್ತೆ ವಿಜಯಶಾಲಿಯಾದರೇ ಹ್ಯಾಟ್ರಿಕ್ ಗೆಲವು ಸಾಧಿಸಿದಂತಾಗುತ್ತದೆ. ಇನ್ನು ಕಾಂಗ್ರೆಸ್ ಹತ್ತು ವರ್ಷದಿಂದ ಅಧಿಕಾರದಿಂದ ದೂರವಿದ್ದು ಕೈಕೈ ಹಿಚುಕಿಕೊಳ್ಳುತ್ತಿದೆ. ಹೇಗಾದರು ಮಾಡಿ 2024 ರಲ್ಲಿ ಅಧಿಕಾರದ ಗದ್ದುಗೆ ಏರಲು ಕಂಕಣ ಕಟ್ಟಿಕೊಂಡಿದೆ. ಈ ಹಿನ್ನೆಲೆ ಎರಡು ರಾಷ್ಟ್ರೀಯ ಪಕ್ಷಗಳು ತನ್ನ ಮಿತ್ರಪಕ್ಷಗಳನ್ನು ಒಗ್ಗೂಡಿಸಿಕೊಂಡು ಸಭೆ ಮಾಡಿವೆ.
ಹೌದು ಬೆಂಗಳೂರಲ್ಲಿ ವಿಪಕ್ಷಗಳ ಸಭೆ ನಡೆದರೇ ಅತ್ತ ಆಡಳಿತಾರೂಢ ಎನ್ ಡಿಎ ಮೈತ್ರಿಕೂಟ ಸಭೆ ನಡೆಯಿತು. ಬೆಂಗಳೂರಿನ ತಾಜ್ ವೆಸ್ಟಎಂಡ್ ಹೊಟೇಲ್ ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಎರಡು ದಿನಗಳಕಾಲ ನಡೆದ ಸಭೆಯಲ್ಲಿ 26 ವಿಪಕ್ಷಗಳು ಭಾಗಿಯಾಗಿದ್ದವು. ಸಭೆಯ ನೇತೃತ್ವವನ್ನು ಕಾಂಗ್ರೆಸ್ ಹೊತ್ತುಕೊಂಡಿತ್ತು. ಈ ಸಭೆಯನ್ನು ವಿಪಕ್ಷಗಳು “ಗೇಮ್ ಚೇಂಜರ್” ಎಂದು ಬಣ್ಣಿಸಿದವು. ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಅಧಿಕಾರದಿಂದ ದೂರವಿಡಲು ಕಂಕಣ ಬದ್ಧವಾದವು. ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಎರಡು ದಿನ ಮೊದಲು ನಡೆದ ವಿಪಕ್ಷಗಳ ಈ ಎರಡನೇ ಸಭೆಗೆ ಮಹಾ ಮೈತ್ರಿಕೂಟಕ I.N.D.I.A (I-ಇಂಡಿಯನ್ N-ನ್ಯಾಷನಲ್ D-ಡೆವಲಪ್ಮೆಂಟ್ I-ಇನ್ಕ್ಲೂಸಿವ್ A-ಅಲೈನ್ಸ್) (ಇಂಡಿಯಾ) ಎಂದು ನಾಮಕರಣ ಮಾಡಿದೆ.
ಈ ಸಭೆಯಲ್ಲಿ ಭಾಗಿಯಾದ ಪಕ್ಷಗಳು
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಆಮ್ ಆದ್ಮಿ ಪಾರ್ಟಿ, ಜೆಡಿಯು, ಆರ್ಜೆಡಿ, ಎನ್ಸಿಪಿ (ಶರದ್ ಪವಾರ್), ಜೆಎಂಎಂ, ಶಿವಸೇನೆ (ಉದ್ಧವ್), ಎಸ್ಪಿ, ಆರ್ಎಲ್ಡಿ, ಅಪ್ನಾದಳ, (ಕಾಮೇರವಾಡಿ), ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಸಿಪಿಐ (ಎಂ), ಸಿಪಿಐ, ಆರ್ಎಸ್ಪಿ, ಎಎಫ್ಬಿ, ಎಂಡಿಎಂಕೆ, ವಿಸಿಕೆ, ಕೆಎಂಡಿಕೆ, ಎಂಎಂಕೆ, ಐಯುಎಂಎಲ್, ಕೇರಳ ಕಾಂಗ್ರೆಸ್, ಕೇರಳ ಕಾಂಗ್ರೆಸ್ (ಜೆ), ಸಿಪಿಐ (ಎಂ) ಎಲ್ ಪಕ್ಷಗಳು ಭಾಗಿಯಾಗಿದ್ದವು.
ಈ ಸಭೆಯಲ್ಲಿ ಬಿಜೆಪಿಯ ಸರ್ವಾಧಿಕಾರಿ ಆಡಳಿತದಿಂದ ಅಪಾಯದಲ್ಲಿರುವ ದೇಶದ ಜಾತ್ಯತೀತ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು, ಜನರ ಸಮಸ್ಯೆಗಳಿಗೆ ಪರಿಹಾರದ ಉದ್ದೇಶದೊಂದಿಗೆ ಮಹಾ ಮೈತ್ರಿಕೂಟ ರಚಿಸಿ ಒಟ್ಟಾಗಿ ಹೋರಾಡುವ ಒಮ್ಮತಕ್ಕೆ ಬರಲಾಗಿದೆ ಎಂದು 26 ವಿಪಕಗಳ ನಾಯಕರು ಘೋಷಣೆ ಮಾಡಿದ್ದಾರೆ.
ಇನ್ನು ಐಎನ್ ಡಿಐಎ-ಇಂಡಿಯಾ ಕೇಂದ್ರ ಕಚೇರಿ ದೆಹಲಿಯಲ್ಲಿ ಇರಲಿದೆ. ಈ ಮೈತ್ರಿಕೂಟದ ನಾಯಕತ್ವ ಯಾರು ವಹಿಸಬೇಕು, ಮೈತ್ರಿ ಕೂಟದ ನಿಲುವು, ರೂಪರೇಷೆ ಮುಂತಾದವುಗಳ ಬಗ್ಗೆ 11 ಮಂದಿ ಸದಸ್ಯರ ಸಮನ್ವಯ ಸಮಿತಿ ನಿರ್ಧರಿಸಲಿದೆ. ಮುಂಬೈನಲ್ಲಿ ಮೂರನೇ ಸಭೆ ನಡೆಯಲಿದೆ.
‘ಐಎನ್ ಡಿಐಎ-ಇಂಡಿಯಾ’ ಮೈತ್ರಿಕೂಟಕ್ಕೆ ಪ್ರತಿಯಾಗಿ ಎನ್ ಡಿಎ ಸಭೆ
ಕರ್ನಾಟಕ ರಾಜಧಾನಿ ಬೆಂಗಳೂರಲ್ಲಿ ‘ಐಎನ್ ಡಿಐಎ-ಇಂಡಿಯಾ’ ವಿಪಕ್ಷಗಳ ಸಭೆಗೆ ಸೆಡ್ಡು ಹೊಡೆದು ಎನ್ ಡಿಎ ಮೈತ್ರಿಕೂಟ ರಾಷ್ಟ್ರ ರಾಜಧಾನಿ ದೆಹಲಿಯ ಅಶೋಕ ಹೊಟೇಲ್ ನಲ್ಲಿ ಸಭೆ ನಡೆಸಿತು. ಈ ಸಭೆಯಲ್ಲಿ 39 ಪಕ್ಷಗಳು ಭಾಗಿಯಾಗಿದ್ದವು. ಅದರಲ್ಲಂತು ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ ಭಾಗಿಯಾಗಿದ್ದು ವಿಶೇಷವಾಗಿತ್ತು.
2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಹಾಗೂ 2019ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಸರ್ವ ಪಕ್ಷಗಳು ಸಭೆಯಲ್ಲಿ ಒಮ್ಮತ ವ್ಯಕ್ತಪಡಿಸಿದವು.
ಇನ್ನು ಎನ್ ಡಿಎ ಸಭೆಯನ್ನು ಪ್ರಧಾನಿ ಮೋದಿಯವರು ಎನ್ ಡಿಎ ಪ್ರದಾಶೀಕ ಆಕಾಂಕ್ಷೆಯ ಸುಂದರ ಕಾಮನಬಿಲ್ಲು ಎಂದು ಬಣ್ಣಿಸಿದ್ದಾರೆ. ಅಲ್ಲದೆ ಎನ್.ಡಿ.ಎ ಎಂದರೆ N- ನ್ಯೂ-ಇಂಡಿಯಾ D-ಡೆವಲಪ್ಡ್ ನೇಷನ್ ಆಂಡ್ ಆ್ಯಸ್ಪಿರೇಶನ್ ಆಫ್ ಪೀಪಲ್ ಎಂದು ಹೊಸ ವ್ಯಾಖ್ಯಾನ ನೀಡಿದರು.
ಎನ್ ಡಿ ಎ ಸಭೆಯಲ್ಲಿ ಭಾಗಿಯಾದ ಪಕ್ಷಗಳು
ಬಿಜೆಪಿ, ಶಿವಸೇನೆ (ಶಿಂಧೆ), ಎನ್ಸಿಪಿ (ಅಜಿತ್ ಪವಾರ್), ಆರ್ಎಲ್ಎಸ್ಪಿ, ಎಐಎಡಿಎಂಕೆ, ಅಪ್ನಾದಳ (ಸೋನೆಯ್ಲಾಲ್), ಎನ್ಪಿಪಿ, ಎನ್ಡಿಪಿಪಿ, ಎಜೆಎಸ್ಯು, ಎಸ್ಕೆಎಂ, ಎಂಎನ್ಎಫ್, ಐಪಿಎಫ್ಟಿ, ಎನ್ಪಿಎಫ್, ಆರ್ಪಿಐ (ಅಠಾವಳೆ), ಎಜಿಪಿ, ಪಿಎಂಕೆ, ತಮಿಳ್ ಮಾನಿಲಾ ಕಾಂಗ್ರೆಸ್, ಯುಪಿಪಿಎಲ್, ಎಸ್ಬಿಎಸ್ಪಿ, ಎಸ್ಎಡಿ (ಸಂಯುಕ್ತ), ಎಂಜಿಪಿ, ಜನನಾಯಕ ಜನತಾ ಪಕ್ಷ, ಪ್ರಹಾರ್ ಜನಶಕ್ತಿ, ರಾಷ್ಟ್ರೀಯ ಸಮಾಜ ಪಕ್ಷ, ಜನ ಸ್ವರಾಜ್ಯ ಶಕ್ತಿ, ಕುಕಿ ಪೀಪಲ್ಸ್ ಒಕ್ಕೂಟ, ಯುಡಿಪಿ, ಎಚ್ಪಿಡಿಪಿ, ನಿಶಾದ್ ಪಕ್ಷ, ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್; ಹಿಂದೂಸ್ತಾನಿ ಅವಾಮ್ ಮೋರ್ಚಾ, ಜನಸೇನಾ,ಮ ಹರಿಯಾಣ ಲೋಕಹಿತ ಪಕ್ಷ, ಭಾರತೀಯ ಧರ್ಮ ಜನಸೇನಾ, ಕೇರಳ ಕಾಮರಾಜ್ ಕಾಂಗ್ರೆಸ್, ಪುತಿಯಾ ತಮಿಳಗಂ, ಲೋಕಜನ ಶಕ್ತಿ (ಆರ್), ಗೋರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್
ಸದ್ಯ ಇಂಡಿಯಾ ಮೈತ್ರಿಕೂಟದಲ್ಲಿ 26 ಪಕ್ಷಗಳಿದ್ದು, ಎನ್ ಡಿಎ ಮೈತ್ರಿಕೂಟದಲ್ಲಿ 38 ಪಕ್ಷಗಳಿವೆ. ಆದರೆ ಜೆಡಿಎಸ್ ಸೇರಿದಂತೆ 13 ಪಕ್ಷಗಳು ಎರಡೂ ಸಭೆಯಲ್ಲಿ ಭಾಗಿಯಾಗದೆ ತಟಸ್ಥವಾಗಿವೆ.