ಕುಗ್ರಾಮದಲ್ಲಿ ಹೀರೋ ಆದ ಐಸಿಸಿ ಅಂಪೈರ್… ಆ ಒಂದು ಕೆಲಸದಿಂದ ಇಡೀ ಹಳ್ಳಿಯ ಚಿತ್ರಣವೇ ಬದಲಾಗಿ ಹೋಯ್ತು…!
ಅನಿಲ್ ಚೌಧರಿ… ಐಸಿಸಿ ಅಂಪೈರ್.. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ರೆ ಅನಿಲ್ ಚೌಧರಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ನಲ್ಲಿ ಅಂಪೈರಿಂಗ್ ಮಾಡಬೇಕಾಗಿತ್ತು. ಆದ್ರೆ ಲಾಕ್ ಡೌನ್ನಿಂದಾಗಿ ಅವರು ಈಗ ಮನೆಯಲ್ಲೇ ಇದ್ದಾರೆ. ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅನಿಲ್ ಚೌಧರಿ ಅವರು ಅಂಪೈರ್ ಆಗಿ ನೇಮಕಗೊಂಡಿದ್ದರು. ಆದ್ರೆ ಕೊರೋನಾ ವೈರಸ್ನಿಂದಾಗಿ ಆ ಸರಣಿಯೇ ರದ್ದುಗೊಂಡಿತ್ತು.
ಹೀಗಾಗಿ ಅನಿಲ್ ಚೌಧರಿ ಅವರು ಒಂದು ವಾರಗಳ ಕಾಲ ತಮ್ಮ ಊರಿಗೆ ತೆರಳಲು ಪ್ಲಾನ್ ಮಾಡಿಕೊಂಡಿದ್ದರು.
ಅಷ್ಟು ಹೊತ್ತಿಗೆ ಲಾಕ್ ಡೌನ್ ಜಾರಿಯಾಗಿತ್ತು. ಹೀಗಾಗಿ ಅನಿಲ್ ಚೌಧರಿ ಅವರು ಊರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಊರಿನಲ್ಲೇ ಲಾಕ್ ಆಗಿಬಿಟ್ಟಿದ್ದರು. ಆದ್ರೆ ಲಾಕ್ ಡೌನ್ ಮುಗಿದ ನಂತರ ಅನಿಲ್ ಚೌಧರಿ ತಮ್ಮ ಊರಿಗೆ ದೇವತಾ ಮನಷ್ಯರಾದ್ರು. ಚೌಧರಿ ಅವರ ಆ ಒಂದು ಸಹಾಯದಿಂದ ಇಡೀ ಊರಿನ ಜನರೇ ಕೊಂಡಾಡುತ್ತಿದ್ದಾರೆ. ಅಷ್ಟಕ್ಕೂ ಚೌಧರಿ ತಮ್ಮ ಊರಿಗೆ ಮಾಡಿರುವುದು ಒಂದು ಸಣ್ಣ ಕೆಲಸ. ಅದು ಏನು ಅಂದ್ರೆ ಇಡೀ ಊರಿನಲ್ಲಿ ಈಗ ಮೊಬೈಲ್ ನೆಟ್ ವರ್ಕ್ ಸಿಗುತ್ತಿದೆ. ಇದಕ್ಕೆ ಕಾರಣರಾದ ಅನಿಲ್ ಚೌಧರಿ ಅವರನ್ನು ಹೀರೋ ಥರಾ ಬಿಂಬಿಸಲಾಗುತ್ತಿದೆ. ಹಳ್ಳಿಯ ಜನ ಪ್ರತಿಯೊಂದು ಕೆಲಸಗಳಿಗೂ ಈಗ ಅನಿಲ್ ಚೌಧರಿ ಅವರ ಮೊರೆ ಹೋಗುತ್ತಿದ್ದಾರೆ.
ಮಾರ್ಚ್ 15ರಂದು ಅನಿಲ್ ಚೌಧರಿ ಅವರು ತನ್ನ ಊರಾದ ಉತ್ತರ ಪ್ರದೇಶದ ಡಂಗ್ರೋಲ್ಗೆ ತೆರಳಿದ್ದರು. ಒಂದು ವಾರ ಊರಿನಲ್ಲಿ ಹಾಯಾಗಿ ಇರೋಣ ಅಂತ ಪ್ಲಾನ್ ಮಾಡಿಕೊಂಡಿದ್ದರು. ಆಗ ಲಾಕ್ ಡೌನ್ ಜಾರಿಯಾಗಿತ್ತು. ಹೀಗಾಗಿ ಊರಿನಲ್ಲೇ ಉಳಿದುಕೊಂಡ ಅನಿಲ್ ಚೌಧರಿಗೆ ಸಮಸ್ಯೆಯಾಗಿದ್ದು ಮೊಬೈಲ್ ನೆಟ್ ವರ್ಕ್. ನೆಟ್ ವರ್ಕ್ ಇಲ್ಲದ ಊರಿನಲ್ಲಿದ್ದ ಅನಿಲ್ ಚೌಧರಿ ಅವರಿಗೆ ಐಸಿಸಿ ಪ್ಯಾನೆಲ್ ಜೊತೆ ಹಾಗೂ ತನ್ನ ಸ್ನೇಹಿತರ ಜೊತೆಗೂ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ನೆಟ್ ವರ್ಕ್ ಎಲ್ಲಿ ಸಿಗುತ್ತೆ ಅಂತ ಹುಡುಕಿಕೊಂಡು ಹೋಗಬೇಕಾಗಿತ್ತು. ಹೀಗೆ ತನ್ನ ಗದ್ದೆಯ ಬಳಿ ಇರುವ ಮರದ ಮೇಲೆ ಕುಳಿತುಕೊಂಡು ಅನಿಲ್ ಚೌಧರಿ ಮಾತನಾಡುತ್ತಿದ್ದರು.
ಅನಿಲ್ ಚೌಧರಿ ಅವರ ಈ ವಿಚಾರ ಹೇಗೋ ಟೆಲಿಕಾಮ್ ಕಂಪೆನಿಗೆ ಗೊತ್ತಾಗಿ ಹೊಯ್ತು. ಅಲ್ಲದೆ ಚೌಧರಿಯವರನ್ನು ಸಂಪರ್ಕ ಮಾಡಿದ್ದ ಟೆಲಿಕಾಮ್ ಕಂಪೆನಿಯು ಡಂಗ್ರೋಲ್ನಲ್ಲಿ ಮೊಬೈಲ್ ಟವರ್ ನಿರ್ಮಿಸಲಾಯ್ತು. ಈಗ ಇಡೀ ಹಳ್ಳಿಯಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುತ್ತಿದೆ. ಜನರು ಆರಾಮವಾಗಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾರೆ. ಮೊಬೈಲ್ ಸೇವೆಯನ್ನು ಹಳ್ಳಿಯ ಜನರು ಬಳಸಿಕೊಳ್ಳುತ್ತಿದ್ದಾರೆ.
ನನ್ನಿಂದ ನನ್ನೂರಿಗೆ ಈ ರೀತಿ ಸಹಾಯ ಆಗುತ್ತೆ ಅಂತ ನಾನು ಊಹಿಸಿರಲಿಲ್ಲ. ಜಲಂಧರ್ನ ಒಬ್ಬ ಪ್ರೊಫೆಸರ್ ಒಬ್ಬರು ಇದೀಗ ಊರಿನಿಂದಲೇ ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಹಾಗೇ ವಿದ್ಯಾರ್ಥಿಗಳು ಫುಲ್ ಖುಷಿಯಾಗಿದ್ದಾರೆ. ಗದ್ದೆಯಲ್ಲಿ ಸೊಳ್ಳೆಗಳ ಜೊತೆ ಆಟವಾಡುವುದರ ಬಗ್ಗೆ ಆನ್ ಲೈನ್ ಕ್ಲಾಸ್ ನಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳ್ತಾರೆ ಅನಿಲ್ ಚೌಧರಿ.
ನಾನು ಈಗ ಬ್ಯಾಂಕ್ ನಲ್ಲಿ ಹಣ ವರ್ಗಾವಣೆಯನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಮಾಡುತ್ತಿದ್ದೇನೆ. ಇಲ್ಲ ಅಂದ್ರೆ ನಾಲ್ಕೈದು ದಿನ ಕಾಯಬೇಕಾಗಿತ್ತು. ಅಂಪೈರ್ ಅನಿಲ್ ಚೌಧರಿಗೆ ನಾನು ಧನ್ಯವಾದ ಹೇಳುತ್ತಿದ್ದೇನೆ. ಒಂದು ಸಣ್ಣ ಸಮಸ್ಯೆಗೆ ಅವರು ಪರಿಹಾರ ನೀಡಿದ್ರು. ಈಗ ಅವರು ನಮ್ಮ ಹಳ್ಳಿಯ ಹೀರೋ ಆಗಿದ್ದಾರೆ ಎಂದು ಡಂಗ್ರೋಲ್ ಹಳ್ಳಿಯ ರಾಮ್ ಕುಮಾರ್ ಹೇಳ್ತಾರೆ.
ಇದೀಗ ನನ್ನಲ್ಲಿ ಹಳ್ಳಿಯ ಜನ ಸಾಕಷ್ಟು ಸಮಸ್ಯೆಗಳನ್ನು ಹೇಳಿಕೊಂಡು ಬಗೆಹರಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದ್ರೆ ನಾನು ಒಬ್ಬ ಅಂಪೈರ್ ಅಂತ ಹೇಳುತ್ತಿದ್ದೇನೆ ಎಂದು ಅನಿಲ್ ಚೌಧರಿ ಹೇಳುತ್ತಾರೆ. ಒಟ್ಟಿನಲ್ಲಿ ಅಂಪೈರ್ ಆಗಿದ್ದ ಅನಿಲ್ ಚೌಧರಿ ಅವರು ಈಗ ತನ್ನ ಹಳ್ಳಿಯಲ್ಲಿ ಹೀರೋ ಆಗಿದ್ದಾರೆ.