ರಾಮನಗರ: ರಾಜ್ಯದಲ್ಲಿನ ಎಲ್ಲ ಕ್ಷೇತ್ರಗಳಲ್ಲಿಯೂ ಮೈತ್ರಿ ಗೆಲ್ಲಿಸಿದರೆ, ನಾನೇ ಪ್ಱಧಾನಿ ಕೈ ಹಿಡಿದು ಮೇಕೆ ದಾಟು ಯೋಜನೆಗೆ ಸಹಿ ಮಾಡಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾರೋಹಳ್ಳಿಯಲ್ಲಿ ಡಾ.ಮಂಜುನಾಥ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ನಮಗೆ ಕನಕಪುರ ಹೊಸದಲ್ಲ. ಹಿಂದೆ ನನ್ನ ವಿರುದ್ಧ ತೇಜಸ್ವಿನಿ ಎಂಬ ಹೆಣ್ಣುಮಗಳನ್ನು ನಿಲ್ಲಿಸಿ ಸೋಲಿಸಿದ್ದರು. ಆದರೆ, ನಾನು ಮತ್ತೆ ಅದೇ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿಯಾದೆ. ನನ್ನನ್ನ ಪ್ರಧಾನಿ ಮಾಡಿದ್ದು ಇದೇ ಕ್ಷೇತ್ರದ ಮಹಾಜನತೆ ಎಂದು ಹೇಳಿದ್ದಾರೆ.
ಡಾ.ಮಂಜುನಾಥ್ ನನ್ನ ಅಳಿಯ ಅನ್ನುವುದಕ್ಕಿಂತ ಜಯದೇವ ಆಸ್ಪತ್ರೆಯಲ್ಲಿ ಅಪಾರ ಸೇವೆ ಮಾಡಿದವರು. ಇವರ ಆರೋಗ್ಯ ಸೇವೆ ದೇಶದ ಗಮನ ಸೆಳೆದಿದೆ. ಅದಕ್ಕಾಗಿ ಮೋದಿ, ಅಮಿತ್ ಶಾ ಇವರ ಸೇವೆ ದೇಶಕ್ಕೆ ಬೇಕು ಅಂತ ಆಹ್ವಾನಿಸಿದರು. ಹೀಗಾಗಿ ಅವರನ್ನು ಇಲ್ಲಿ ನಿಲ್ಲಿಸಿದರು ಎಂದು ಹೇಳಿದ್ದಾರೆ.
ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಮೋದಿ ಭರವಸೆ ಕೊಟ್ಟಿದ್ದಾರೆ. ಮೊನ್ನೆ ಚಿಕ್ಕಬಳ್ಳಾಪುರದಲ್ಲಿ ನನಗೆ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ 28 ಸ್ಥಾನ ಗೆದ್ದು ಕೊಡುವ ಮಾತು ಕೊಟ್ಟಿದ್ದೇನೆ. ಅದಕ್ಕಾಗಿ ಈ ವಯಸ್ಸಿನಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ. ನೀವು 28 ಸ್ಥಾನಗಳನ್ನ ನೀಡಿದ್ರೆ ಮೋದಿ ಕೈಹಿಡಿದು ಮೇಕೆದಾಟಿಗೆ ಸಹಿ ಹಾಕಿಸ್ತೇನೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.