ಇಮ್ರಾನ್ ಖಾನ್ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ – ತುರ್ತು ಭೂಸ್ಪರ್ಷ…
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ರಾವಲ್ಪಿಂಡಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಶನಿವಾರ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.
ಇಮ್ರಾನ್, ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಪಟ್ಟಣದಿಂದ ಬನಿಗಾಲಾಗೆ ತೆರಳುತ್ತಿದ್ದಾಗ ತಾಂತ್ರಿಕ ದೋಷದಿಂದಾಗಿ ರಾವಲ್ಪಿಂಡಿಯ ಅಡಿಯಾಲಾ ಗ್ರಾಮದಲ್ಲಿ ಹೆಲಿಕಾಪ್ಟರ್ ಇಳಿಸಲಾಗಿದೆ.
ನಂತರ, ಇಮ್ರಾನ್ ಖಾನ್ ರಸ್ತೆ ಮೂಲಕ ಇಸ್ಲಾಮಾಬಾದ್ ಬಳಿಯ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಚೆಕ್ ವಿತರಿಸಲು ಮಾಜಿ ಪ್ರಧಾನಿ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಗೆ ತೆರಳಿದ್ದರು. ಕಳೆದ ತಿಂಗಳು, ಕೆಟ್ಟ ಹವಾಮಾನದಿಂದಾಗಿ ಖಾನ್ ಅವರ ವಿಮಾನವು ಟೇಕ್-ಆಫ್ ಆದ ಕೂಡಲೇ ಇಳಿಯಬೇಕಾಗಿತ್ತು.
ಈ ಘಟನೆಗೆ ಒಂದು ದಿನ ಮೊದಲು ಇಮ್ರಾನ್ ಖಾನ್ “4 ಜನರು ತನ್ನನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ” ಎಂದು ಆರೋಪಿಸಿದ್ದರು. ಅವರಿಗೆ ಏನಾದರೂ ಅನಾಹುತ ಸಂಭವಿಸಿದಲ್ಲಿ ಈ ಸಂಚುಕೋರರ ಹೆಸರನ್ನು ದೇಶದ ಮುಂದೆ ಇಡಲಾಗುವುದು ಎಂದು ಎಚ್ಚರಿಸಿದರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ವಾಲಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಖಾನ್ ಅವರು ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕರು ಧಾರ್ಮಿಕ ದ್ವೇಷವನ್ನು ಪ್ರಚೋದಿಸಲು ಧರ್ಮನಿಂದೆಯ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.
Technical fault in Imran Khan helicopter – emergency landing…