ಅಡಿಲೇಡ್ ನಲ್ಲಿ ಭಾರತ – ಬಾಂಗ್ಲಾ ಸೆಣಸಾಟ – ಪಂದ್ಯಕ್ಕೆ ಮಳೆ ಸಾಧ್ಯತೆ…
ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದೀಗ ಸೋಲು ಮರೆತು ಯಶಸ್ಸಿನ ಹಾದಿ ಹಿಡಿಯಬೇಕಿದೆ. ಮೂರು ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನು ಹೊಂದಿರುವ ರೋಹಿತ್ ಪಡೆ ಸೆಮಿಸ್ಗೆ ಲಗ್ಗೆ ಇಡಲು ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಈ ಹಿನ್ನಲೆಯಲ್ಲಿ ಬುಧವಾರ ಬಾಂಗ್ಲಾದೇಶ ವಿರುದ್ಧ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.
ಬಾಂಗ್ಲಾ ದೇಶ ಕೂಡ ನಾಲ್ಕು ಅಂಕಗಳನ್ನ ಪಡೆದು ಸೆಮಿಸ್ ರೇಸ್ ನಲ್ಲಿದೆ. ರನ್ ರೇಟ್ನಲ್ಲಿ ಭಾರತ ಮೇಲುಗೈ ಸಾಧಿಸಿದೆ. ಆದರೆ, ಬಾಂಗ್ಲಾದೇಶದ ನಾಯಕ ಶಕಿಬ್ ಹಲ್ ಹಸನ್ ಮಾತನಾಡಿ “ ನಾವು ಕಪ್ ಗೆಲ್ಲಲು ಬಂದಿಲ್ಲ ಭಾರತ ಅದಕ್ಕಾಗಿ ಬಂದಿದೆ ಎಂದು ಒತ್ತಡ ಹೆಚ್ಚಿಸುವ ಕೆಲಸ ಮಾಡುತ್ತಿದೆ.
ಬಾಂಗ್ಲಾದೇಶ 11 ಟಿ20 ಪಂದ್ಯಗಳಲ್ಲಿ ಭಾರತದ ವಿರುದ್ಧ ಒಮ್ಮೆ ಮಾತ್ರ ಗೆದ್ದಿದೆ.
ರಾಹುಲ್ಗೆ ಮತ್ತೊಂದು ಅವಕಾಶ
ಪರ್ತ್ನ ಬೌನ್ಸಿ ಪಿಚ್ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ಗಳು ಭಾರತೀಯ ಬ್ಯಾಟ್ಸ್ಮನ್ಗಳ ದೌರ್ಬಲ್ಯವನ್ನು ತೆರೆದಿಟ್ಟರು. ಸೂರ್ಯಕುಮಾರ್ ಹೊರತುಪಡಿಸಿ ಎಲ್ಲರೂ ಬ್ಯಾಟಿಂಗ್ ನಲ್ಲಿ ವಿಫಲರಾಗಿದ್ದಾರೆ. ಉಪನಾಯಕ ಕೆ ಎಲ್ ರಾಹುಲ್ ಆಡಿದ ಮೂರು ಪಂದ್ಯಗಳಲ್ಲಿ ಕೇವಲ 4, 9, 9 ರನ್ ಗಳಿಸಿ ತೀವ್ರ ನಿರಾಸೆ ಮೂಡಿಸಿದರು. ಆದರೆ, ಕೋಚ್ ದ್ರಾವಿಡ್ ಅವರ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದರಿಂದ ತಂಡದಲ್ಲಿ ಸ್ಥಾನ ಪಡೆಯುವ ಚಾನ್ಸ್ ಇದೆ.
ಮತ್ತೊಂದೆಡೆ ಬೆನ್ನು ನೋವಿನಿಂದ ಬಳಲುತ್ತಿರುವ ದಿನೇಶ್ ಕಾರ್ತಿಕ್ ಬದಲಿಗೆ ವಿಕೆಟ್ ಕೀಪರ್ ರಿಷಬ್ ಪಂತ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೂರನೇ ಪಂದ್ಯದಲ್ಲಿ ದೀಪಕ್ ಹೂಡಾ ಅವರ ಪ್ರಯೋಗ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಮತ್ತೊಮ್ಮೆ ಸ್ಥಾನ ಗಿಟ್ಟಿಸಿಕೊಳ್ಳಬಹುದು.
ವೇಗಿಗಳಾದ ಭುವನೇಶ್ವರ್, ಶಮಿ ಮತ್ತು ಅರ್ಷದೀಪ್ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುತ್ತಿರುವುದು ಸಕಾರಾತ್ಮಕ ಅಂಶವಾಗಿದೆ.
ಪಂದ್ಯಕ್ಕೆ ಮಳೆ ಭೀತಿ
. ಪಂದ್ಯ ನಡೆಯುವ ಬುಧವಾರ ಶೇ.60 ರಷ್ಟು ವರುಣನ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗಂಟೆಗೆ 20-30 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ವರದಿಯಾಗಿದೆ. ಸ್ಥಳೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 6.30ಕ್ಕೆ ಆರಂಭವಾಗಲಿದ್ದು, ರಾತ್ರಿ 8ರ ನಂತರ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ರದ್ದಾಗಿ ಒಂದಿಷ್ಟು ಅಂಕಗಳನ್ನು ನೀಡಿದರೆ ಸೆಮಿಸ್ನ ಓಟ ಹೆಚ್ಚು ಕುತೂಹಲ ಮೂಡಿಸಲಿದೆ. ಹಾಗಾಗಿಯೇ ಪಂದ್ಯ ಮಳೆಯಿಲ್ಲದೆ ನಡೆಯಲಿ, ಭಾರತ ವಿಜಯಶಾಲಿಯಾಗಿ ಹೊರಹೊಮ್ಮಲಿ ಎಂಬುದು ಅಭಿಮಾನಿಗಳ ಬಯಕೆ.
IND Vs BAN: India-Bangla clash in Adelaide – Rain likely for match…