ವಿಹಾರಿಗೆ ನೋ ಚಾನ್ಸ್.. ಪಂತ್ ಗೆ ಅವಕಾಶ..ಸಿರಾಜ್ ಸ್ಥಾನದಲ್ಲಿ ಯಾರು..?
ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕು. ಆಗ ಮಾತ್ರ ಭಾರತದ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಟೆಸ್ಟ್ ಸರಣಿ ಗೆಲುವು ನನಸಾಗಲಿದೆ.
ಆದರೆ, ಕೊಹ್ಲಿ ಸೇನೆಗೆ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬೆನ್ನು ನೋವಿನಿಂದಾಗಿ ತಂಡದಿಂದ ಹೊರಗುಳಿದಿರುವ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳುವ ಸಾಧ್ಯತೆಗಳಿದ್ದರೂ, ಕೊನೆಯ ಕ್ಷಣದವರೆಗೂ ಕೊಹ್ಲಿ ಮೂರನೇ ಟೆಸ್ಟ್ ಪಂದ್ಯವಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಇನ್ನ ಟೀಂ ಇಂಡಿಯಾದ ಯುವ ವೇಗಿ ಮೊಹಮ್ಮದ್ ಸಿರಾಜ್, ಎರಡನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದು, ಮೂರನೇ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ಇದು ಒಂದು ಕಡೆಯಾದ್ರೆ ಮಿಡಲ್ ಆರ್ಡರ್ ನಲ್ಲಿ ಇನ್ನಷ್ಟು ಬಲಿಷ್ಠವಾಗಬೇಕಿದೆ. ಅದೇ ರೀತಿ ರಿಷಬ್ ಪಂತ್ ಬೇಕಾಬಿಟ್ಟಿ ಶಾಟ್ ಹೊಡೆಯುವುದನ್ನ ಬಿಟ್ಟು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಬೇಕಾಗಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಅನಾವಶ್ಯಕ ಶಾಟ್ ಆಡುವುದಕ್ಕೆ ಹೋಗಿ ತಮ್ಮ ವಿಕೆಟ್ ಕೈ ಚೆಲ್ಲಿದ್ದರು. ಇದು ಸಾಕಷ್ಟು ಟೀಕೆಗೆ ಕಾರಣವಾಗಿದೆ.
ಅವರನ್ನ ತಂಡದಿಂದ ಕೈಬಿಟ್ಟು ವೃದ್ಧಿಮಾನ್ ಸಹಾಗೆ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ವಿಚಾರವಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಪ್ರತಿಕ್ರಿಯೆ ನೀಡಿದ್ದು, ರಿಷಬ್ ಪಂತ್ ಪರ ಬ್ಯಾಟ್ ಬೀಸಿದ್ದಾರೆ.
ಪ್ರಮುಖ ಮ್ಯಾಚ್ ಗಳಲ್ಲಿ ರಿಷಬ್ ಪಂತ್ ಅಂತಹ ಆಟಗಾರರನ್ನು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಕೈಬಿಡುತ್ತೆ ಎಂದು ನಾನು ಅಂದುಕೊಳ್ಳುವುದಿಲ್ಲ.
ಯಾಕಂದರೇ ಪಂತ್ ಟೀಂ ಇಂಡಿಯಾದ ಎಕ್ಸ್ ಫ್ಯಾಕ್ಟರ್, ಮ್ಯಾಚ್ ವಿನ್ನರ್. ಶಾಟ್ ಸೆಲೆಕ್ಷನ್ ಬಗ್ಗೆ ನಾಯಕ ವಿರಾಟ್ ಕೊಹ್ಲಿ, ಕೋಚ್ ರಾಹುಲ್ ದ್ರಾವಿಡ್ ಪಂತ್ ಜೊತೆ ಮಾತನಾಡಿದ್ರೆ ಸರಿಹೋಗುತ್ತದೆ.
ಕೇವಲ ಕೀಪಿಂಗ್ ವಿಚಾರವಾಗಿ ಮಾತನಾಡಿದ್ರೆ ವೃದ್ಧಿಮಾನ್ ಸಹಾ, ಪಂತ್ ಜಾಗವನ್ನು ತುಂಬಲ್ಲನು. ಆದ್ರೆ ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ ಪಂತ್, ವೃದ್ಧಿಮಾನ್ ಸಹಾಗಿಂತಲೂ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಜಾಫರ್ ಹೇಳಿದ್ದಾರೆ.
ಇನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿ ಹನುಮ ವಿಹಾರಿ ಬೆಂಚ್ ಕಾಯಬೇಕಾಗುತ್ತದೆ. ಎರಡನೇ ಟೆಸ್ಟ್ ನಲ್ಲಿ ಹನುಮ ವಿಹಾರಿ ಉತ್ತಮ ಆಟವಾಡಿದರೂ ಪೂಜಾರ ಮತ್ತು ರಹಾನೆ ಅರ್ಧಶತಕ ಬಾರಿಸಿದ್ದಾರೆ.
ಹೀಗಾಗಿ ಮೂರನೇ ಟೆಸ್ಟ್ ನಲ್ಲಿ ಈ ಇಬ್ಬರೂ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ ಪಂದ್ಯವಾಡುವ ಸಾಧ್ಯತೆಗಳು ಇರುವುದರಿಂದ ಹನುಮ ವಿಹಾರಿಗೆ ಚಾನ್ಸ್ ಸಿಗೋದು ದೌಟು.
ವೇಗಿಗಳಿಗೆ ಅನುಕೂಲವಾಗುವ ಪಿಚ್ ನಲ್ಲಿ ಗಾಯಗೊಂಡಿರುವ ಸಿರಾಜ್ ಬದಲಿಗೆ ಉಮೇಶ್ ಯಾದವ್ ಗೆ ಚಾನ್ಸ್ ಸಿಗಬಹುದು ಎಂದಿದ್ದಾರೆ ಜಾಫರ್.