IND vs SA | ಗೆಲ್ಲಲೇಬೇಕು ಟೀಂ ಇಂಡಿಯಾ.. ಸೋತ್ರೆ ಸರಣಿ ಗೋವಿಂದಾ..!!
ಮೊದಲ ಟಿ 20 ಪಂದ್ಯದಲ್ಲಿ ಸೋತಿರುವ ಟೀಂ ಇಂಡಿಯಾ ಇದೀಗ ಹಸಿದ ಹೆಬ್ಬುಲಿಯಂತೆ ಆಗಿದೆ. ಮೊದಲ ಪಂದ್ಯದಲ್ಲಿನ ಸೋಲು ಟೀಂ ಇಂಡಿಯಾಗೆ ಮರ್ಮಾಘಾತ ನೀಡಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 211 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 19.1 ಓವರ್ ಗಳಲ್ಲಿ 212 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಬೊಂಬಾಟ್ ಆಗಿದ್ದರೂ ಬೌಲಿಂಗ್ ವಿಭಾಗ ಸಂಪೂರ್ಣವಾಗಿ ವಿಫಲವಾಗಿತ್ತು. ಹೀಗಾಗಿ ಇಂದು ಕಟಕ್ ನಲ್ಲಿ ನಡೆಯಲಿರುವ 2ನೇ ಪಂದ್ಯಕ್ಕಾಗಿ ಟೀಂ ಇಂಡಿಯಾ ಸಜ್ಜಾಗಿದೆ.
ಕಟಕ್ ನ ಭಾರಾಮತಿ ಕ್ರೀಡಾಂಗಣದಲ್ಲಿ 2ನೇ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯ ಟೀಮ್ ಇಂಡಿಯಾದ ಪಾಲಿಗೆ ಒಂದು ರೀತಿಯಲ್ಲಿ ಮಾಡು ಇಲ್ಲವೆ ಮಡಿ ಇದ್ದ ಹಾಗೇ.
ತಾಂತ್ರಿಕವಾಗಿ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೂ ಸರಣಿ ಸೋತ ಹಾಗೆ ಆಗುವುದಿಲ್ಲ. ಆದರೆ ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಎಡವಿದ್ರೂ ಸರಣಿ ಸೋಲು ಕಟ್ಟಿಟ್ಟ ಬುತ್ತಿ.

ಹೀಗಾಗಿ ಯಂಗ್ ಇಂಡಿಯಾ ಕಂ ಬ್ಯಾಕ್ ಮಾಡಲೇ ಬೇಕಿದೆ. ಒಂದು ವೇಳೆ ಈ ಪಂದ್ಯದಲ್ಲಿ ಮತ್ತೆ ಎಡವಿದರೆ ಸರಣಿ ಗೆಲುವಿನ ಆಸೆ ಕೈ ಬಿಡಬೇಕಾದ ಸ್ಥಿತಿಗೆ ಬರುತ್ತದೆ.
ಅಂದಹಾಗೆ ದೆಹಲಿ ಪಂದ್ಯದಲ್ಲಿ ಟೀಂ ಇಂಡಿಯಾ ಮಾಡಿದ ತಪ್ಪನ್ನು ಇಂದಿನ ಪಂದ್ಯದಲ್ಲಿ ಮರೆತು ಆಡಬೇಕಿದೆ. ಮುಖ್ಯವಾಗಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಲೈನ್ಅಪ್ ಬಲಿಷ್ಠವಾಗಿದೆ. ಹೀಗಾಗಿ ಆಫ್ರಿಕಾ ಬ್ಯಾಟರ್ ಗಳನ್ನು ಕಟ್ಟಿ ಹಾಕಲು ಟೀಂ ಇಂಡಿಯಾ ಹೊಸ ತಂತ್ರವನ್ನು ಕೂಡ ಹುಡುಕಬೇಕಾಗಿದೆ.
ಟಿ20 ಕ್ರಿಕೆಟ್ನಲ್ಲಿ ಕೇವಲ ಸ್ಪಿನ್ ಮೂಲಕ ಪಂದ್ಯ ಗೆಲ್ಲಬಹುದು ಅನ್ನುವ ಲೆಕ್ಕಾಚಾರವನ್ನು ಟೀಮ್ ಇಂಡಿಯಾ ಮೊದಲು ಕೈ ಬಿಡಬೇಕಿದೆ.
ಪಿಚ್ ಸ್ಪಿನ್ ಫ್ರೆಂಡ್ಲಿ ಇದ್ದರೂ ಸ್ಪಿನ್ನರ್ಗಳು ಬೌಲಿಂಗ್ ಅರಂಭಿಸುವ ಮೊದಲೇ ದಕ್ಷಿಣ ಆಫ್ರಿಕಾ ಪಂದ್ಯವನ್ನು ದೂರ ತೆಗೆದುಕೊಂಡು ಹೋದರೆ ರಣತಂತ್ರ ಉಲ್ಟಾ ಆಗುತ್ತದೆ. ಹೀಗಾಗಿ ಟೀಮ್ ಇಂಡಿಯಾ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯುವುದು ಅನಿವಾರ್ಯ.
ರಿಷಬ್ ಪಂತ್ ನಾಯಕತ್ವಕ್ಕೂ ಇದು ಅಗ್ನಿ ಪರೀಕ್ಷೆ. ಮೊದಲ ಪಂದ್ಯದಲ್ಲಿ ಬೌಲಿಂಗ್ ಬದಲಾವಣೆ ವೇಳೆ ಮಾಡಿದ ಎಡವಟ್ಟು ಮತ್ತೆ ನಡೆದರೆ ಫಲಿತಾಂಶದಲ್ಲೂ ವ್ಯತ್ಯಾಸ ಆಗುವುದು ಖಚಿತ.
ಒಟ್ಟಿನಲ್ಲಿ ಟೀಮ್ ಇಂಡಿಯಾ ಸಾಂಘೀಕವಾಗಿ ಆಟ ಆಡುವ ಜೊತೆಗೆ ಬದಲಾವಣೆಯನ್ನೂ ಮಾಡಿಕೊಳ್ಳಬೇಕಿದೆ.