ಮಿಸ್ಟರ್ ಚೇತನ್ ಶರ್ಮಾ…! ಪೃಥ್ವಿ ಶಾ, ಪಡಿಕ್ಕಲ್ ಗಿಂತಲೂ ಅದ್ಭುತ ಆಟಗಾರನೇ ಅಭಿಮನ್ಯು ಈಶ್ವರನ್ ?
ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಬಿಸಿಸಿಐ ಮತ್ತು ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಾರಣ ಶುಬ್ಮನ್ ಗಿಲ್ ಗಾಯಗೊಂಡಿದ್ದಾರೆ. ಅವರ ಬದಲಿಗೆ ಪಶ್ಚಿಮ ಬಂಗಾಳದ ಅಭಿಮನ್ಯು ಈಶ್ವರನ್ ಅವರನ್ನು ಇಂಗ್ಲೆಂಡ್ ಗೆ ಕಳುಹಿಸುವ ನಿಧಾರ ತೆಗೆದುಕೊಂಡಿರುವುದು.
ಹಾಗೇ ನೋಡಿದ್ರೆ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಶುಬ್ಮನ್ ಗಿಲ್ ಗಾಯಗೊಳ್ಳುತ್ತಿದ್ದಂತೆ ಇಬ್ಬರು ಬದಲಿ ಆರಂಭಿಕ ಬ್ಯಾಟ್ಸ್ ಮೆನ್ ಗಳನ್ನು ಕಳುಹಿಸಿಕೊಡುವಂತೆ ಆಯ್ಕೆ ಸಮಿತಿಗೆ ಮನವಿ ಮಾಡಿತ್ತು. ಆದ್ರೆ ಆಯ್ಕೆ ಸಮಿತಿ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಜೊತೆಗೆ ಅಭಿಮನ್ಯು ಈಶ್ವರನ್ ಅವರನ್ನು ಕಳುಹಿಸುವ ಬಗ್ಗೆ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಮನಸ್ಸು ಮಾಡಿದ್ದರು. ಈ ನಡುವೆ, ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಅವರ ಗಮನಕ್ಕೆ ತರಲಿಲ್ಲ.
ಇದೀಗ ಅಭಿಮನ್ಯು ಈಶ್ವರನ್ ಅವರ ಆಯ್ಕೆಯಂತೂ ಕ್ರಿಕೆಟ್ ವಲಯದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ದೇಸಿ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಲ್ಲ. ಜೊತೆಗೆ ಟೆಸ್ಟ್ ಕ್ರಿಕೆಟ್ ನ ಕೌಶಲ್ಯಗಳು ಇಲ್ಲ. ಹೀಗಾಗಿ ಅಭಿಮನ್ಯು ಈಶ್ವರನ್ ಆಯ್ಕೆಯ ಬಗ್ಗೆ ಈಗಾಗಲೇ ಅಪಸ್ವರ ಕೇಳಿಬರುತ್ತಿದೆ.
ಉತ್ತರ ಪ್ರದೇಶ ಮೂಲದ ಅಭಿಮನ್ಯು ಈಶ್ವರನ್ ಅವರು ಪಶ್ಚಿಮ ಬಂಗಾಳ ಪರ 19 ವಯೋಮಿತಿ ಮತ್ತು ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿದ್ದಾರೆ.
64 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿರುವ ಅಭಿಮನ್ಯು 4401 ರನ್ ದಾಖಲಿಸಿದ್ದಾರೆ. ಇದರಲ್ಲಿ 13 ಶತಕ ಹಾಗೂ 18 ಅರ್ಧಶತಕಗಳಿವೆ. ಸರಾಸರಿ 44ರಂತೆ ಕಲೆ ಹಾಕಿದ್ದಾರೆ. ಇನ್ನು 62 ಲೀಸ್ಟ್ ಎ ಪಂದ್ಯಗಳನ್ನು ಆಡಿರುವ ಅಭಿಮನ್ಯು ಈಶ್ವರನ್, 2875 ರನ್ ಗಳಿಸಿದ್ದು, ಆರು ಶತಕ ಹಾಗೂ 18 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಹಾಗೇ 19 ಟಿ-ಟ್ವೆಂಟಿ ಪಂದ್ಯಗಳಲ್ಲಿ 471 ರನ್ ಗಳಿಸಿದ್ದು, ಒಂದು ಶತಕ ಮತ್ತು 2 ಅರ್ಧಶತಕಗಳನ್ನು ದಾಖಲಿಸಿದ್ದಾರೆ .
ಆದ್ರೆ ಅಭಿಮನ್ಯು ಈಶ್ವರನ್ ಅವರು ಈ ಹಿಂದಿನ ರಣಜಿ ಋತುವಿನಲ್ಲಿ ನಿರೀಕ್ಷಿತ ಮಟ್ಟದ ಯಶ ಸಾಧಿಸಿಲ್ಲ. ಅದರ ಜೊತೆಗೆ ಪೃಥ್ವಿ ಶಾ, ದೇವದತ್ ಪಡಿಕ್ಕಲ್ ನಂತಹ ಆಟಗಾರರು ದೇಶಿ ಕ್ರಿಕೆಟ್ ನಲ್ಲಿ ರನ್ ಮಳೆಯನ್ನೇ ಸುರಿಸಿದ್ದಾರೆ. ಅದರಲ್ಲೂ ಪೃಥ್ವಿ ಶಾ ಅತ್ಯುತ್ತಮ ಲಯದಲ್ಲಿದ್ದಾರೆ. ತಂಡಕ್ಕೆ ಮತ್ತೆ ಕಮ್ ಬ್ಯಾಕ್ ಮಾಡುವ ಹಾದಿಯಲ್ಲಿದ್ದಾರೆ. ಇಂತಹುದರಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ಪಡಿಕ್ಕಲ್ ಮತ್ತು ಪೃಥ್ವಿ ಶಾ ಅವರನ್ನು ಬಿಟ್ಟು ಅಭಿಮನ್ಯು ಈಶ್ವರನ್ ಅವರಿಗೆ ಮಣೆ ಹಾಕಿರುವುದು ಅಚ್ಚರಿಯನ್ನುಂಟು ಮಾಡುತ್ತಿದೆ.
ಇನ್ನೊಂದೆಡೆ ಇಂಗ್ಲೆಂಡ್ ನಲ್ಲಿರುವ ಟೀಮ್ ಇಂಡಿಯಾಗೆ ಆರಂಭಿಕರ ಸಮಸ್ಯೆ ಏನು ಇಲ್ಲ. ಯಾಕಂದ್ರೆ ಕೆ.ಎಲ್. ರಾಹುಲ್, ಮಯಾಂಕ್ ಅಗರ್ ವಾಲ್ ಕೂಡ ತಂಡದಲ್ಲಿದ್ದಾರೆ. ರೋಹಿತ್ ಶರ್ಮಾ ಕೂಡ ಇದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಬೇಕಾಗಿದ್ದಾರೆ.
ಒಂದು ವೇಳೆ, ಪೃಥ್ವಿ ಶಾ ಅಥವಾ ದೇವದತ್ ಪಡಿಕ್ಕಲ್ ಅವರನ್ನು ಆಯ್ಕೆ ಮಾಡುತ್ತಿದ್ರೆ, ಟೀಮ್ ಇಂಡಿಯಾಗೆ ಕೆ.ಎಲ್. ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಬಹುದಿತ್ತು.
ಒಟ್ಟಿನಲ್ಲಿ ಆಯ್ಕೆ ಸಮಿತಿ, ಬಿಸಿಸಿಐ, ನಾಯಕ, ಕೋಚ್ ಸೇರಿದಂತೆ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ನಲ್ಲಿ ಭಿನ್ನಾಭಿಪ್ರಾಯಗಳಿರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇನ್ನು ಟೀಮ್ ಇಂಡಿಯಾದ ಆಯ್ಕೆಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಕೂಡ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದ ಸೋಲಿನ ನಂತರ ವಿರಾಟ್ ಕೊಹ್ಲಿ ಬಹಿರಂಗವಾಗಿಯೇ ತಂಡದ ಆಟಗಾರರ ಆಯ್ಕೆಯ ಬಗ್ಗೆ ಹೇಳಿಕೆ ನೀಡಿದ್ದರು. ಇದನ್ನೆಲ್ಲಾ ಗಮನಿಸಿದಾಗ ಟೀಮ್ ಇಂಡಿಯಾದಲ್ಲಿ ಯಾವುದು ಕೂಡ ಸರಿ ಇಲ್ಲ ಎಂಬ ಭಾವನೆ ಬರುತ್ತಿದೆ.