ಕಠೋರ ಚಳಿಗಾಲವನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧ
ಲಡಾಖ್, ಸೆಪ್ಟೆಂಬರ್17: ಲಡಾಖ್ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ವಿಗ್ನತೆ ಹೆಚ್ಚುತ್ತಿದ್ದು ಈ ನಡುವೆ , ಕಠಿಣ ಚಳಿಗಾಲದ ತಿಂಗಳನ್ನು ಎದುರಿಸಲು ಭಾರತೀಯ ಸೇನೆ ಸಜ್ಜಾಗಿದೆ.
ಕಠೋರ ಚಳಿಗಾಲವನ್ನು ಎದುರಿಸಲು ಆಹಾರ ಪದಾರ್ಥಗಳು, ಬಟ್ಟೆ ಮತ್ತು ಇಂಧನ ಸೇರಿದಂತೆ ಎಲ್ಲಾ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿರುವುದಾಗಿ ಭಾರತೀಯ ಸೇನೆಯು ಹೇಳಿದೆ.
ಭಾರತೀಯ ಸೇನೆಯು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಪ್ರತಿ ಯೋಧ ಅತ್ಯುತ್ತಮ ಬಟ್ಟೆ, ಟೆಂಟೇಜ್, ಆಹಾರ ಇತ್ಯಾದಿಗಳನ್ನು ಪಡೆಯುತ್ತಿದ್ದಾರೆ ಎಂದು 14 ಕಾರ್ಪ್ಸ್ ನ ಮುಖ್ಯಸ್ಥ ಮೇಜ್ ಜನರಲ್ ಅರವಿಂದ ಕಪೂರ್ ಹೇಳಿದ್ದಾರೆ.
ನಮ್ಮ ಲಾಜಿಸ್ಟಿಕ್ ಮೂಲಸೌಕರ್ಯವು ಅಚ್ಚುಕಟ್ಟಾಗಿ ನಿರ್ಮಿಸಲ್ಪಟ್ಟಿದೆ. ಮುಂಚೂಣಿಯಲ್ಲಿ ನಿಯೋಜಿಸಲಾದ ಪ್ರತಿಯೊಬ್ಬ ಯೋಧನು ಚಳಿಗಾಲದ ಬಟ್ಟೆ ಮತ್ತು ಟೆಂಟೇಜ್ ನ ಅತ್ಯಾಧುನಿಕತೆಯನ್ನು ಹೊಂದಿದ್ದಾರೆ ಎಂದು ಲಡಾಖ್ ನಲ್ಲಿ ಮೇಜ್ ಜನರಲ್ ಕಪೂರ್ ಹೇಳಿದರು.
ಪ್ರತಿ ಅಧಿಕಾರಿ, ಜೆಸಿಒ, ಯೋಧನಿಗೆ ಉತ್ತಮ ಗುಣಮಟ್ಟದ ಪಡಿತರವನ್ನು ನೀಡಲಾಗುತ್ತದೆ, ಅದು ಹೆಚ್ಚು ಪೌಷ್ಠಿಕಾಂಶ ಮತ್ತು ಹೆಚ್ಚಿನ ಕ್ಯಾಲೋರಿಫಿಕ್ ಮೌಲ್ಯವನ್ನು ಹೊಂದಿದೆ. ಪೂರ್ವ ಲಡಾಕ್ನಲ್ಲಿ ನಿಯೋಜಿಸಲಾದ ಸೈನಿಕರು ಇಲ್ಲಿನ ಸ್ಥಳೀಯ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದಾರೆ ಎಂದು ಅವರು ಹೇಳಿದರು.
ಹೆಚ್ಚಿನ ಎತ್ತರದಲ್ಲಿ ನಿಯೋಜಿಸಲಾಗಿರುವ ಸೈನಿಕರಿಗೆ ಹೆಚ್ಚಿನ ಪ್ರೋಟೀನ್ ಒದಗಿಸಲು ಭಾರತೀಯ ಸೇನೆಯು ಉತ್ತಮ ಗುಣಮಟ್ಟದ ಪಡಿತರವನ್ನು ಸಂಗ್ರಹಿಸುತ್ತದೆ.
ಪ್ರತಿಯೊಬ್ಬ ಸೈನಿಕನ ಶ್ರೇಣಿಯನ್ನು ಲೆಕ್ಕಿಸದೆ ಈ ಪಡಿತರ ಪ್ರಮಾಣವು ಒಂದೇ ಆಗಿರುತ್ತದೆ. ಅಲ್ಲದೆ, ಲಡಾಖ್ನಲ್ಲಿ ಇಲ್ಲಿ ನಿಯೋಜಿಸಲಾಗಿರುವ ಪಡೆಗೆ ಅಗತ್ಯವಿರುವ ಎಲ್ಲಾ ಪಡಿತರವನ್ನು ನಾವು ಸ್ವೀಕರಿಸಿದ್ದೇವೆ ಮತ್ತು ಸಂಗ್ರಹಿಸಿದ್ದೇವೆ ಎಂದು ಅವರು ಹೇಳಿದರು. ಸೈನ್ಯದ ಪೂರೈಕೆ ಸರಪಳಿಯು ಸ್ಥಳೀಯ ಉತ್ಪನ್ನಗಳೊಂದಿಗೆ ಸಂಪರ್ಕ ಹೊಂದಿದೆ, ಆದ್ದರಿಂದ ನಾವು ಸ್ಥಳೀಯ ರೈತರಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದೇವೆ ಮತ್ತು ಇದರಿಂದ ಸ್ಥಳೀಯ ಆರ್ಥಿಕತೆಯನ್ನು ಸುಧಾರಿಸಬಹುದಾಗಿದೆ ಎಂದರು.
ಏಪ್ರಿಲ್-ಮೇ ತಿಂಗಳಿನಿಂದ ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಸಂಘರ್ಷ ವಾತಾವರಣ ಮುಂದುವರೆದಿದೆ. ಅಷ್ಚೇ ಅಲ್ಲ ಚೀನಾ ಫಿಂಗರ್ ಪ್ರದೇಶ ಮತ್ತು ಪೂರ್ವ ಲಡಾಖ್ ಪ್ರದೇಶದ ಇತರ ಘರ್ಷಣೆ ಸ್ಥಳಗಳನ್ನು ಖಾಲಿ ಮಾಡಲು ನಿರಾಕರಿಸಿದೆ
ಉದ್ವಿಗ್ನತೆಯನ್ನು ನಿವಾರಿಸುವಲ್ಲಿ ನಡೆದ ಅನೇಕ ಸುತ್ತಿನ ಮಾತುಕತೆಗಳು ಯಾವುದೇ ಮಹತ್ವದ ಫಲಿತಾಂಶವನ್ನು ನೀಡುವಲ್ಲಿ ವಿಫಲವಾಗಿವೆ. ಈಗ ಭಾರತೀಯ ಪಡೆ ಕೂಡಾ ಎತ್ತರದ ಪರ್ವತ ಪ್ರದೇಶದಲ್ಲಿ ದೀರ್ಘಾವಧಿಯ ನಿಯೋಜನೆಗೆ ಸಿದ್ಧರಾಗಿದ್ದಾರೆ.