ಭಾರತೀಯ ರೈಲ್ವೆಯಿಂದ ಬೆಂಗಳೂರು ಜನರಿಗೆ ಭರ್ಜರಿ ಉಡುಗೊರೆ
ಹೊಸದಿಲ್ಲಿ, ಅಗಸ್ಟ್ 18: ಭಾರತೀಯ ರೈಲ್ವೆ ಬೆಂಗಳೂರಿನ ಪ್ರಯಾಣಿಕರಿಗೆ ಉಡುಗೊರೆ ನೀಡಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಒಂದು ರೈಲ್ವೆ ನಿಲ್ದಾಣ ನಿರ್ಮಾಣವಾಗಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೋಮವಾರ ಘೋಷಿಸಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಬೆಂಗಳೂರು ಪ್ರಯಾಣಿಕರಿಗೆ ರೈಲ್ವೆ ಉಡುಗೊರೆ, ದಶಕಗಳಷ್ಟು ಹಳೆಯದಾದ ಜನರ ಬೇಡಿಕೆಯನ್ನು ಈಡೇರಿಸಿದೆ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೈಲ್ವೆ ನಿಲ್ದಾಣವು ಬರುತ್ತಿದೆ. ಇದರಿಂದಾಗಿ ಜನರಿಗೆ ವಿಮಾನ ನಿಲ್ದಾಣಕು ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ವರದಿಗಳ ಪ್ರಕಾರ, ರೈಲ್ವೆ ನಿಲ್ದಾಣವು ವಿಮಾನ ನಿಲ್ದಾಣದಿಂದ ಎರಡು ಮೂರು ಕಿಲೋಮೀಟರ್ ದೂರದಲ್ಲಿ ನಿರ್ಮಾಣವಾಗಲಿದೆ ಮತ್ತು ಈ ವಿಭಾಗದಲ್ಲಿ ಚಲಿಸುವ ಎಲ್ಲಾ ಆರು ರೈಲುಗಳು ವಿಮಾನ ನಿಲ್ದಾಣದ ಸಮೀಪವಿರುವ ನಿಲುಗಡೆ ಹಂತದಲ್ಲಿ ನಿಲ್ಲಲಿವೆ.
ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರಿಗೆ ಮತ್ತು ವಿಮಾನ ನಿಲ್ದಾಣಕ್ಕೆ ಕಡಿಮೆ ಖರ್ಚಿನಲ್ಲಿ ಹೋಗ ಬಯಸುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.