ರಾಷ್ಟ್ರ ರಾಜಧಾನಿಯಲ್ಲಿನ ಬಾಬರ್ ರಸ್ತೆಯನ್ನು 5 ಆಗಸ್ಟ್ ಮಾರ್ಗ ಎಂದು ಮರುನಾಮಕರಣಕ್ಕೆ ಒತ್ತಾಯ
ಹೊಸದಿಲ್ಲಿ, ಅಗಸ್ಟ್ 6: ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ಸಮಾರಂಭದ ಮುನ್ನಾ ದಿನವಾದ ಮಂಗಳವಾರ ದೆಹಲಿಯ ಮಾಜಿ ಬಿಜೆಪಿ ಅಧ್ಯಕ್ಷ ವಿಜಯ್ ಗೋಯೆಲ್ ಅವರು ರಾಷ್ಟ್ರ ರಾಜಧಾನಿಯಲ್ಲಿರುವ ಬಾಬರ್ ರಸ್ತೆಯನ್ನು 5 ಆಗಸ್ಟ್ ಮಾರ್ಗ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಅಧ್ಯಕ್ಷರಿಗೆ ಬಾಬರ್ ರಸ್ತೆಯನ್ನು ಮರುನಾಮಕರಣ ಮಾಡುವಂತೆ ಪತ್ರ ಬರೆದಿರುವುದಾಗಿ ಕೇಂದ್ರದ ಮಾಜಿ ಸಚಿವರು ಹೇಳಿದ್ದಾರೆ.
ಬಾಬರ್ ಭಾರತದ ಮೇಲೆ ದಾಳಿ ಮಾಡಿ ಅಯೋಧ್ಯೆಯ ರಾಮ ಮಂದಿರ ನಾಶಪಡಿಸಿದ ಆಕ್ರಮಣಕಾರ. ಆಗಸ್ಟ್ 5 ರಂದು ಪ್ರಧಾನಿ ಅಯೋಧ್ಯೆಯಲ್ಲಿ ಭೂಮಿ ಪೂಜೆ ಸಮಾರಂಭವನ್ನು ನಡೆಸಲಿರುವ ಕಾರಣ ಬಾಬರ್ ರಸ್ತೆಯನ್ನು ಆಗಸ್ಟ್ 5 ರ ಮಾರ್ಗ ಎಂದು ಮರುನಾಮಕರಣ ಮಾಡುವುದು ಸೂಕ್ತ ಕ್ರಮವಾಗಿದೆ ಎಂದು ಗೋಯೆಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬಿಜೆಪಿ ಮುಖಂಡರು ತಮ್ಮ ಬೇಡಿಕೆಗೆ ಒತ್ತಾಯಿಸಲು ಸಹಿ ಅಭಿಯಾನವನ್ನು ಕೂಡ ಪ್ರಾರಂಭಿಸುವುದಾಗಿ ಹೇಳಿದರು. ನಾನು ನಿವಾಸಿ ಸಂಘ ಮತ್ತು ವ್ಯಾಪಾರಿಗಳ ಸಂಘದೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ಬೇಡಿಕೆಯನ್ನು ಬೆಂಬಲಿಸುತ್ತಿದ್ದಾರೆ. ಹೆಸರನ್ನು ಬದಲಾಯಿಸುವ ಕ್ರಮವನ್ನು ಯಾರಾದರೂ ಆಕ್ಷೇಪಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ, ಎಂದು ಗೋಯೆಲ್ ಹೇಳಿದರು.
ಬಾಬರ್ ರಸ್ತೆಯಲ್ಲಿ ನಿವಾಸ-ಕಮ್-ಆಫೀಸ್ ಹೊಂದಿರುವ ಗೋಯೆಲ್, ಬಾಬರ್ ರಸ್ತೆಗೆ ತೆರಳಿ ನಾಮ ಫಲಕದಲ್ಲಿದ್ದ ಬಾಬರ್ ರಸ್ತೆ ಅಳಿಸಿ, ಅದರ ಕೆಳಗೆ 5 ಆಗಸ್ಟ್ ರೋಡ್ ಎಂದು ಬರೆದಿದ್ದಾರೆ. ರಸ್ತೆಯ ಹೆಸರನ್ನು ಬದಲಾಯಿಸುವಲ್ಲಿ ರಾಜಕೀಯವಿಲ್ಲ. 2015 ರಲ್ಲಿ, ಔರಂಗಜೇಬ್ ರಸ್ತೆಯನ್ನು ಎಪಿಜೆ ಅಬ್ದುಲ್ ಕಲಾಂ ಮಾರ್ಗ ಎಂದು ಬದಲಾಯಿಸಲಾಯಿತು ಮತ್ತು 2016 ರಲ್ಲಿ ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ್ ಮಾರ್ಗ ಎಂದು ಮರುನಾಮಕರಣ ಮಾಡಲಾಯಿತು. ಆದ್ದರಿಂದ ಬಾಬರ್ ರಸ್ತೆಯ ಹೆಸರನ್ನು ಬದಲಾಯಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಗೋಯೆಲ್ ಹೇಳಿದರು.