ಹಿರಿಯ ಸಾಹಿತಿ, ಗೀತರಚನೆಕಾರ ಜಾವೇದ್ ಅಖ್ತರ್ ಧ್ವನಿವರ್ಧಕಗಳನ್ನು ಬಳಸಿ ಮತ್ತೊಬ್ಬರಿಗೆ ತೊಂದರೆಯಾಗುವ ರೀತಿಯಲ್ಲಿ ಅಜಾನ್ ಕೂಗುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಶನಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಜಾವೇದ್ ಅಖ್ತರ್ ‘ ಸುಮಾರು 50 ವರ್ಷಗಳ ಕಾಲ ಭಾರತದಲ್ಲಿ ಗಟ್ಟಿ ಧ್ವನಿಯಲ್ಲಿ ಪ್ರಾರ್ಥನೆ ಮಾಡುವುದನ್ನು ಅಥವಾ ಅಜಾನ್ (ಬಾಂಗ್) ಮಾಡುವುದನ್ನು ಹರಾಮ್ ಎಂದು ಪರಿಗಣಿಸಲಾಗಿತ್ತು. ನಂತರ ಅದು ಹಲಾಲ್ ಆಗಿ ಮಾರ್ಪಟ್ಟಿತು. ಅದಕ್ಕೆ ಅಂತ್ಯವಿಲ್ಲ. ಆದರೆ ಅದಕ್ಕೆ ಒಂದು ಅಂತ್ಯವಿರಬೇಕು. ಅಜಾನ್ ಚೆನ್ನಾಗಿದೆ ಆದರೆ ಲೌಡ್ ಸ್ಪೀಕರ್ ಹಾಕಿ ಅಜಾನ್ ಕೂಗುವುದು ಇತರರಿಗೆ ತೊಂದರೆಯನ್ನು ಉಂಟುಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಕನಿಷ್ಟ ಈ ಸಮಯದಲ್ಲಿ ಆದರೂ ಅವರು ಅದನ್ನು ನಿಲ್ಲಿಸುತ್ತಾರೆ ಎಂದು ನಾನು ಅಂದುಕೊಂಡಿದ್ದೇನೆ’ ಎಂದು ಬರೆದಿದ್ದಾರೆ.
ಧ್ವನಿವರ್ಧಕ ಬಳಕೆಯ ಕುರಿತು ನೆಟ್ಟಿಗರು ಕೇಳಿರುವ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು ದೇವಾಲಯವಾಗಿರಲಿ ಅಥವಾ ಮಸೀದಿಯಾಗಿರಲಿ, ಹಬ್ಬದ ಸಮಯದಲ್ಲಿ ಧ್ವನಿವರ್ಧಕಗಳನ್ನು ಬಳಸಿದರೆ ಅದು ಒಳ್ಳೆಯದು, ಆದರೆ ಪ್ರತಿದಿನ ದೇವಾಲಯಗಳಲ್ಲಿ ಅಥವಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು. ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಅಜಾನ್ ಅನ್ನು ಲೌಡ್ ಸ್ಪೀಕರ್ ಇಲ್ಲದೆ ನೀಡಲಾಗಿದೆ. ಅಜಾನ್ ನಿಮ್ಮ ನಂಬಿಕೆಯ ಭಾಗವಾಗಿದೆ, ಇದು ಗ್ಯಾಜೆಟ್ ಅಲ್ಲ ಎಂದು ರೀಟ್ವೀಟ್ ಮಾಡಿದ್ದಾರೆ.
ಕೊರೋನಾ ಸೋಂಕಿನ ಭೀತಿಯಿಂದ ಭಾರತದಲ್ಲಿ ಲಾಕ್ ಡೌನ್ ಜಾರಿಯಾದ ಸಮಯದಲ್ಲಿ ಎಲ್ಲಾ ಧರ್ಮದ ಪ್ರಾರ್ಥನಾ ಮಂದಿರಗಳನ್ನು ಮುಚ್ಚಲು ಆದೇಶಿಸಲಾಗಿತ್ತು. ಆ ಸಂದರ್ಭದಲ್ಲೂ ಜಾವೇದ್ ಅಖ್ತರ್ ಕೊರೋನಾ ಸೋಂಕಿನ ಭೀತಿಯಿಂದ ಮೆಕ್ಕಾ ಮದೀನಾವನ್ನು ಮುಚ್ಚಲಾಗಿದೆ. ಆದರಿಂದ ಸರಕಾರದ ಆದೇಶ ಪಾಲಿಸಿ ಮಸೀದಿಗಳನ್ನು ಮುಚ್ಚಿ ಎಂದು ಸಮುದಾಯದ ಜನರಲ್ಲಿ ಕೇಳಿಕೊಂಡಿದ್ದರು. ಏಪ್ರಿಲ್ 24 ರಂದು ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾದಾಗ ಜಾವೆದ್ ಅಖ್ತರ್ ‘ ನಾನು ನನ್ನ ಎಲ್ಲಾ ಮುಸ್ಲಿಂ ಸಹೋದರರನ್ನು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡುತ್ತೇನೆ. ಮನೆ, ನೆಲ, ಇವೆಲ್ಲವೂ ಆತನಿಂದಲೇ ಮಾಡಲ್ಪಟ್ಟಿದೆ. ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ಬದಲು, ಮನೆಯಲ್ಲಿಯೇ ಮಾಡಬಹುದು ಅಥವಾ ಎಲ್ಲಿಯಾದರೂ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಬಹುದು’ ಎಂದು ವಿನಂತಿ ಮಾಡಿಕೊಂಡಿದ್ದರು.
ಈ ಮೊದಲು ಸೋನು ನಿಗಮ್ ಅಜಾನ್ ಕೂಗುವುದರ ಬಗ್ಗೆ ಅಪಸ್ವರ ಎತ್ತಿದಾಗ ಅನೇಕರು ಸೋನು ನಿಗಮ್ ವಿರುದ್ಧ ವಾಕ್ ಪ್ರವಾಹ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು.