ರಾಜಕಾರಣದಲ್ಲಿ ಯಾರು ಸತ್ಯವಂತರು? : ಎಚ್.ಡಿ.ದೇವೆಗೌಡ
ಮೈಸೂರು: ರಾಜಕಾರಣದಲ್ಲಿ ಯಾರು ಸತ್ಯವಂತರು? ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಹೇಳಿದ್ದಾರೆ.
ಇಂದು ‘ಜೆಡಿಎಸ್ ಜನತಾ ಜಲಧಾರೆ’ ಕಾರ್ಯಕ್ರಮ ಉದ್ಘಾಟನೆಗೆ ಹೆಚ್.ಡಿ ಕೋಟೆಯ ಬೀಚನಹಳ್ಳಿಗೆ ಆಗಮಿಸಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭ್ರಷ್ಟಾಚಾರ ಎಲ್ಲಾ ಕಡೆ ತುಂಬಿ ಹೋಗಿದೆ. ರಾಜಕಾರಣದಲ್ಲಿ ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಾರೆ. ಕಾಂಗ್ರೆಸ್ನವರು ಏನು ಮಾಡಿಯೇ ಇಲ್ಲವೇ?, ಯಾರು ಸಾಚ ಇದ್ದಾರೆ ಹೇಳಿ? ಎಂದು ಪ್ರಶ್ನಿಸಿದರು.
ಇನ್ನೂ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ದ್ದಾಗ ಶೇ.10 ಸರಕಾರ ಎಂದು ಪ್ರಧಾನಿಯವರು ಆರೋಪ ಮಾಡಿದ್ದರು. ಆ ಸಮಯದಲ್ಲಿ ನಾನು ಯಾವುದೇ ಆರೋಪ ಮಾಡಿಲ್ಲ, ಈಗಲೂ ಮಾಡುವುದಿಲ್ಲ. ಪರ್ಸೆಂಟೇಜ್ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.
ಅಲ್ಲದೇ ಗುತ್ತಿಗೆದಾರರ ಸಂಘದ 40 ಪರ್ಸೆಂಟ್ ಕಮಿಷನ್ ಆರೋಪಕ್ಕೂ ನನಗೂ ಸಂಬಂಧವಿಲ್ಲ. ನನ್ನ ಮಗ ನೀರಾವರಿ ಸಚಿವ ಅಥವಾ ಪಿಡಬ್ಲ್ಯೂಡಿ ಮಿನಿಸ್ಟರ್ ಆಗಿದ್ದರೇ ನಾನು ಮಾತನಾಡುತ್ತಿದ್ದೆ. ಈಗ ಆರೋಪಕ್ಕೂ ನನಗೂ ಸಂಬಂಧವಿಲ್ಲ. ಆರೋಪ ಮಾಡಿಕೊಳ್ಳಲಿ ಬಿಡಿ ನಮಗೇನು ಎಂದರು.
ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿ ವಿಚಾರದಲ್ಲಿ ಕೆಲವರು ಉತ್ಪ್ರೇಕ್ಷೆಯಿಂದ ಮಾತನಾಡುತ್ತಾರೆ. ಜೆಡಿಎಸ್ ಕಾರ್ಯಕ್ರಮ ನೋಡಿ ಒಂದಲ್ಲಾ ಒಂದು ಬಣ್ಣ ಕಟ್ಟುತ್ತಾರೆ. ನಮ್ಮ ಜೊತೆ ಇಲ್ಲಿಗೆ ಯಾರಾದರೂ ಬಂದಿದ್ದಾರೆ?, ಸುಮ್ಮನೆ ಯಾರೋ ಏನೇನೋ ಹೇಳುತ್ತಾರೆ, ಹೇಳಲಿ ಬಿಡಿ ಎಂದರು.