ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೇರೆಯದ್ದೇ ಕಾರಣ ಕೊಟ್ಟಿದ್ದಾರೆ.
ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಹೀನಾಯವಾಗಿ ಸೋತಿರುವುದರಿಂದ ಆ ಪಕ್ಷದ ಮತಗಳು ಬಿಜೆಪಿ ಬುಟ್ಟಿಗೆ ಬಿದ್ದು ಅವರ ಗೆಲುವಿಗೆ ನೆರವಾಯಿತು. ಮುಖ್ಯವಾಗಿ ಶಿರಾದಲ್ಲಿ ಜೆಡಿಎಸ್ ತನ್ನ ಮತಗಳನ್ನಾದರೂ ಉಳಿಸಿಕೊಂಡಿದ್ದರೆ ಖಂಡಿತ ಬಿಜೆಪಿ ಇಷ್ಟು ಸುಲಭದಲ್ಲಿ ಗೆಲ್ಲುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್ಗಳಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಶಿರಾದಲ್ಲಿ ಟಿ.ಬಿ.ಜಯಚಂದ್ರ ಜನತೆಯ ಬದುಕು ಉಳಿಸುವ ನದಿನೀರು ಹರಿಸಿದ್ದರು. ಬಿಜೆಪಿಯವರು ಬಂದು ಅಕ್ರಮವಾಗಿ ಸಂಪಾದಿಸಿದ್ದ ಹಣದ ಹೊಳೆ ಹರಿಸಿದ್ದರು. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ. ಜನರ ಸೇವೆ ಮಾಡಿದವರನ್ನು ಜನ ಪ್ರಾಮಾಣಿಕವಾಗಿ ಗುರುತಿಸಿ ಹರಸಬೇಕು.
ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಸೋಲನ್ನು ನಾವು ವಿನೀತರಾಗಿ ಒಪ್ಪಿಕೊಂಡಿದ್ದೇವೆ. ಆದರೆ ಇದು ಪ್ರಜಾಪ್ರಭುತ್ವದ ಸೋಲು. ಅಕ್ರಮ ಗಳಿಕೆಯ ಹಣ ಮತ್ತು ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು ಎನ್ನುವುದು ವಿಷಾದದ ಸಂಗತಿ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಅಧಿಕಾರರೂಢ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಆಡಳಿತ ಪಕ್ಷದ ಶಾಸಕರಿದ್ದರೆ ತಮ್ಮ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಜನರಲ್ಲಿರುತ್ತದೆ. ಇದೇ ಫಲಿತಾಂಶ ಸಾಮಾನ್ಯ ಚುನಾವಣೆಯಲ್ಲಿ ನಿರೀಕ್ಷಿಸಲಾಗದು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವನ್ನು ಸ್ವೀಕರಿಸಲೇಬೇಕು. ನಾವೂ ಒಪ್ಪಿಕೊಂಡಿದ್ದೇವೆ. ಇದರಿಂದ ಪಕ್ಷದ ಕಾರ್ಯಕರ್ತರು ಕಂಗೆಡಬೇಕಾಗಿಲ್ಲ. ಇದರಿಂದ ಯಾವ ಪಕ್ಷವೂ ಬಲಶಾಲಿಯಾಗುವುದಿಲ್ಲ, ಯಾವ ಪಕ್ಷವೂ ಬಲಹೀನವಾಗುವುದಿಲ್ಲ. ಇದು ಸಮಗ್ರ ರಾಜ್ಯದ ಜನಾಭಿಪ್ರಾಯ ಅಲ್ಲ. ಇದು ಎರಡು ಸ್ಥಾನಗಳಿಗೆ ನಡೆದ ಚುನಾವಣೆ ಮಾತ್ರ ಎಂದಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಜನರಿಗೆ ಒಳ್ಳೆಯದಾಗಲಿ, ನಮ್ಮ ಶಾಸಕನೂ ರಾಜಕೀಯವಾಗಿ ಜನಪ್ರಿಯನಾಗಲಿ ಎಂದು ಆರ್.ಆರ್ ನಗರಕ್ಕೆ ಸುಮಾರು ರೂ.2000 ಕೋಟಿ ಮೊತ್ತದ ಕಾಮಗಾರಿಯನ್ನು ಮಂಜೂರು ಮಾಡಿದ್ದೆ. ಅದರ ಫಲ ನಮ್ಮ ಪಕ್ಷಕ್ಕೆ ಸಿಗಲಿಲ್ಲ, ಅವರಿಗೆ ಸಿಕ್ಕಿದೆ.
ಮುನಿರತ್ನ ಅವರು ಪಕ್ಷಾಂತರ ಮಾಡಿದ ದಿನದಿಂದ ಚುನಾವಣಾ ತಯಾರಿ ಪ್ರಾರಂಭಿಸಿದ್ದರು. ನಾವು ನಮ್ಮ ಅಭ್ಯರ್ಥಿಯ ಆಯ್ಕೆಯನ್ನು ಸ್ವಲ್ಪ ತಡವಾಗಿ ಮಾಡಿದೆವು, ಇದರಿಂದಾಗಿ ಪ್ರಚಾರ ವಿಳಂಬವಾಗಿ ಪ್ರಾರಂಭಿಸಬೇಕಾಯಿತು. ಸೋಲಿಗೆ ಇದೂ ಒಂದು ಕಾರಣ ಇರಬಹುದು ಎಂಬುದು ಸಿದ್ದರಾಮಯ್ಯ ಅವರ ವಿಶ್ಲೇಷಣೆಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel