ಇಥಿಯೋಪಿಯ ಇಂದ ಶಿವಮೊಗ್ಗದ ಮೂಲಕ ಕೊಡಗಿನವರೆಗೆ ಕಾಫಿಯ ಪಯಣ (ಭಾಗ-2): Saakshatv Naavu kelada charitre episode5
(ಮುಂದುವರಿದ ಭಾಗ)
16ನೇ ಶತಮಾನದ ಮಧ್ಯಭಾಗದಲ್ಲಿ ನಮ್ಮ ಮಲೆನಾಡಿನ ಸೂಫಿ ಸಂತ ಬಾಬಾ ಬುಡನ್ ಹಜ್ ಯಾತ್ರೆ ಕೈಗೊಂಡಾಗ, ಯೆಮೆನ್ ದೇಶದ ಪ್ರಸಿದ್ಧ ಬಂದರು ನಗರ “ಮೋಚಾ” ದಲ್ಲಿ ಪ್ರಥಮ ಬಾರಿಗೆ ಕಾಫಿಯನ್ನು ಸೇವಿಸಿದಾಗ ಅದರ ರುಚಿಗೆ ಮನಸೋತು ಅದನ್ನು ಭಾರತಕ್ಕೆ ತೆಗೆದುಕೊಂಡು ಹೋಗಲು ದಾರಿ ಹುಡುಕುತ್ತಾರೆ. ಬಿಗಿಯಾದ ಭದ್ರತಾ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಬಾಬಾ ತನ್ನ ಗಡ್ಡದಲ್ಲಿ ಏಳು ಕಾಫಿ ಬೀಜಗಳನ್ನು ಮುಚ್ಚಿಕೊಂಡು ಕಳ್ಳಸಾಗಣೆ ಮಾಡಿ ಭಾರತಕ್ಕೆ ವಾಪಸ್ ಮರಳುತ್ತಾರೆ. ಬಂದ ಆನಂತರದಲ್ಲಿ ಚಿಕ್ಕಮಗಳೂರಿನ ಚಂದ್ರಗಿರಿ ಪರ್ವತ ಶ್ರೇಣಿಯ ಇಳಿಜಾರಿನಲ್ಲಿ ಅದನ್ನು ಹಾಕುತ್ತಾರೆ, ಆದರೆ ನಾವುಗಳು ತಿಳಿದು ಕೊಂಡಂತೆ ಬಾಬಾ ಅವರು ಬಿಸಾಕಿದ ಬೀಜಗಳಿಂದ ಮಲೆನಾಡಿನಲ್ಲಿ ಕಾಫಿ ತೋಟಗಳು ತಲೆ ಎತ್ತಲಿಲ್ಲ. Saakshatv Naavu kelada charitre episode5
ಮೊಘಲ್ ಚಕ್ರವರ್ತಿ ಜಹಾಂಗೀರ್ (1695 – 1627) ಆಳ್ವಿಕೆಯ ಕಾಲದಲ್ಲಿ ಆಂಗ್ಲರ ರಾಯಭಾರಿಯಾಗಿ ಅವನ ಆಸ್ಥಾನಕ್ಕೆ ನಿಯೋಜನೆ ಕೊಂಡಿದ್ದ ಸರ್ ಥಾಮಸ್ ರೋ ಜೊತೆಗೆ ಆಗಮಿಸಿದ ಕ್ರೈಸ್ತ ಪಾದ್ರಿ ಎಡ್ವರ್ಡ್ ಟೆರ್ರಿ, ಜಹಾಂಗೀರ್ ಅವರ ಆಸ್ಥಾನದಲ್ಲಿ ಕಾಫಿ ಸೇವನೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ಜಹಾಂಗೀರ್ ರಾಜಧಾನಿಯಲ್ಲಿ ಪ್ರತಿಷ್ಠಿತ ವರ್ಗದವರು ಖಾವಾಖಾನಸ್ (Qahwahkhanas – Coffee Houses) ಗಳಲ್ಲಿ ರಾಜಕೀಯ ಮತ್ತು ಇತರೆ ವಿಷಯಗಳ ಬಗ್ಗೆ ಹರಟೆ ಹೊಡೆಯುತ್ತಿದ್ದರು. ಖಾವಾ ಕಾಫಿಯ ಮೂಲ ಅರೇಬಿಕ್ ಪದ ಮತ್ತು ಖಾವಾಖಾನಸ್ ಇಂದಿನ ಕಾಲದ ಕೆಫೆಕಾಫಿ ತರಹ ಕಾರ್ಯನಿರ್ವಹಿಸುತ್ತಿದ್ದವು.
ಪಾದ್ರಿ ಎಡ್ವರ್ಡ್ ಟೆರ್ರಿ ಜಹಾಂಗೀರ್ ರಾಜಧಾನಿಯಲ್ಲಿ ಕಾಫಿಯ ಬಗ್ಗೆ ಆಂಗ್ಲ ಭಾಷೆಯಲ್ಲಿ ಈ ಕೆಳಗಿನಂತೆ ಬರೆದಿದ್ದಾನೆ:-
“Many of the people there (in India), who are strict in their religion, drink no wine at all; but they use a liquor more wholesome than pleasant, they call Coffee; made by a black seed boyld in water, which turns it almost into the same colours but doth very little alter the taste of the water: not withstanding it is very good to help digestion, to quicker the spirits, and to cleanse the blood”. ಪಾದ್ರಿಯ ಈ ವರ್ಣನೆಯಿಂದ ಒಂದು ಮಾತು ಖಾತರಿ ಆಗುತ್ತದೆ, ಅದು ಏನೆಂದರೆ ಜಹಾಂಗೀರ್ ರಾಜಧಾನಿಯಲ್ಲಿ ತಯಾರಿಸುತ್ತಿದ್ದ ಕಾಫಿಗೆ ಹಾಲು ಮತ್ತು ಬೆಲ್ಲ ಹಾಕುತ್ತಿರಲ್ಲಿಲ್ಲ. ಅದೇ ರೀತಿ ಕಾಫಿಯ ಬೀಜಗಳನ್ನು ಅರಬ್ ಇಂದ ಆಮದು ಮಾಡಿಕೊಂಡು ಕಾಫಿ ತಯಾರಿಸುತ್ತಿದ್ದರು ಹೊರತು ಅದನ್ನು ಅವರ ರಾಜ್ಯದಲ್ಲಿ ಬೆಳಯುತ್ತಿರಲ್ಲಿಲ್ಲ.
ಮೊಘಲರ ತರಹ ಅರಬ್, ಪೋರ್ಚುಗೀಸ್ ಮತ್ತು ಡಚ್ ವ್ಯಾಪಾರಿಗಳ ಜೊತೆಗೆ ನಿಕಟ ಸಂಬಂಧ ಹೊಂದಿದ ಇನ್ನೊಂದು ರಾಜ್ಯವೆಂದರೆ ನಮ್ಮ ಮಲೆನಾಡಿನ ಇಕ್ಕೇರಿ ಮತ್ತು ಕೊಡಗು ರಾಜ್ಯ. ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಬೆಳೆಯುವ ಕಾಳುಮೆಣಸು (pepper – black gold), ಅಕ್ಕಿ, ಏಲಕ್ಕಿ, ಉತ್ಕೃಷ್ಟ ಜಾತಿಯ ಮರಗಳು ಹೀಗೆ ಹಲವಾರು ಸಾಮಗ್ರಿಗಳಿಗಾಗಿ ಅರಬ್, ಪೋರ್ಚುಗೀಸ್ ಮತ್ತು ಡಚ್ ದೇಶದ ವ್ಯಾಪಾರಿಗಳು ಇಕ್ಕೇರಿ ಮತ್ತು ಕೊಡಿಗಿನ ರಾಜರ ಜೊತೆಗೆ ಉತ್ತಮ ಸಂಭಂದ ಹೊಂದಿದ್ದರೂ. ಇನ್ನೂ ಮಲೆನಾಡಿನ ಇವೆರಡು ರಾಜ್ಯಗಳ ಮಧ್ಯೆ ಅತ್ಯುತ್ತಮ ಸಂಬಂದ ಹೊಂದಿದ್ದು, ಇದರ ಪರಿಣಾಮವಾಗಿ ಇಕ್ಕೇರಿ ರಾಜರ ಅಧೀನದಲ್ಲಿದ್ದ ಬಂದರುಗಳನ್ನು ಕೊಡಗಿನವರು ತಮ್ಮ ವ್ಯಾಪಾರಕ್ಕಾಗಿ ಉಪಯೋಗಿಸುತ್ತಿದ್ದರು
ಇಕ್ಕೇರಿ ರಾಜ ಹಿರಿಯ ವೆಂಕಟಪ್ಪ ನಾಯಕರ ಆಳ್ವಿಕೆಯ ಕಾಲದಲ್ಲಿ ಕಾರವಾರದಿಂದ ಹಿಡಿದು ಕೇರಳದ ಮಾಹೆವರೆಗಿನ ಪಶ್ಚಿಮ ಕಡಲತೀರ ಮತ್ತು ಆ ಭಾಗದ ಎಲ್ಲಾ ಬಂದರಿನ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿಕೊಂಡು “ಪಶ್ಚಿಮ ಸಮುದ್ರದ ದೇವರು” (Lord of Western Sea) ಎಂದು ಕರೆಯಲ್ಪಡುತ್ತಿದ್ದು, ಇವರ ಕಾಲದಲ್ಲಿ ಈ ಕಾಫಿಯ ಕಚ್ಚಾ ಬೀಜಗಳು ಇಕ್ಕೇರಿಯ ಮಾರುಕಟ್ಟೆ ಸೇರುತ್ತದೆ. ರಾಜರ ಚಿಕ್ಕಪ್ಪನ ಪೌತ್ರರಾದ ಶಿವಪ್ಪನಾಯಕ ಮತ್ತು ವೆಂಕಟಪ್ಪ ನಾಯಕರು ಹೊಸದಾಗಿ ಸ್ವಾಧೀನಪಡಿಸಿಕೊಂಡ ವೇಣುಪುರ ಅಂದರೆ ಬಿದನೂರಿನಲ್ಲಿ (ಇಂದಿನ ನಗರ) ಹೊಸ ಕೋಟೆ, ಅರಮನೆ, ರಸ್ತೆ ಮತ್ತು ಇತರೆ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು, ಅವರಿಗೆ ಬಹು ಪ್ರಿಯವಾದ ಕೃಷಿ ಮತ್ತು ತೋಟಗಾರಿಕೆಯ ಬಗ್ಗೆ ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದರು. ಇಕ್ಕೇರಿಯ ಎಲ್ಲಾ ರಾಜರಿಗೆ ಕೃಷಿ ಮತ್ತು ತೋಟಗಾರಿಕೆಯ ಬಗ್ಗೆ ಅಪಾರವಾದ ಆಸಕ್ತಿ ಮತ್ತು ಜ್ಞಾನವನ್ನು ಹೊಂದಿದ್ದರು ಎಂದು ತಿಳಿದುಕೊಳ್ಳಲು ಒಮ್ಮೆ ಇಕ್ಕೇರಿಯ ಬಸವರಾಜ ನಾಯಕರು ಬರೆದ “ಶ್ರೀಶಿವತತ್ವರತ್ನಾಕರ” ಎಂಬ ಮಹಾನ್ ವಿಶ್ವಕೋಶವನ್ನು ಓದಿದರೆ ಸಾಕು. Saakshatv Naavu kelada charitre episode5
ಇಕ್ಕೇರಿ ನಾಯಕರು ಅಂದಿನ ಕಾಲದಲ್ಲೇ ಕೃಷಿ ಮತ್ತು ತೋಟಗಾರಿಕೆಗೆ ಹೆಚ್ಚಿನ ಒತ್ತು ನೀಡಿದ್ದು ತಮ್ಮ ರಾಜ್ಯದ ಹಲವಾರು ಕಡೆಗಳಲ್ಲಿ ಒಂದು ತರಹದ ಗಿಡಗಳ, ಮರಗಳ ಮತ್ತು ಸಸ್ಯ ಪ್ರಭೇದಗಳ (Monoculture) ತೋಟಗಳನ್ನು ಸ್ಥಾಪಿಸುತ್ತಾರೆ. ಅದೇ ರೀತಿ ಅಕ್ಕಿಯ ಹಲವಾರು ಬಗೆಯ ತಳಿಗಳನ್ನು ಸಂರಕ್ಷಿಸಿ ಅದನ್ನು ಬೆಳೆಸಿದರು. ಇಕ್ಕೇರಿ ನಾಯಕರ ಈ ತೋಟಗಳು ಇರುವ ಪ್ರದೇಶವನ್ನು ಜನರು ಕಾಲಕ್ರಮೇಣ ಅಲ್ಲಿ ಬೆಳಸುತ್ತಿರುವ ಗಿಡ, ಮರ ಅಥವಾ ಪ್ರಬೇಧಗಳ ಹೆಸರು ಮತ್ತು ಅದರ ಕೊನೆಗೆ “ಸರ” ಎಂದು ಸೇರಿಸಿ ಕರೆಯಲು ಆರಂಭಿಸುತ್ತಾರೆ. ನಮ್ಮ ಮಲೆನಾಡಿಗರಿಗೆ ಕಾಡಿನಲ್ಲಿ ಸಿಗುವ ಬಗೆ ಬಗೆಯ ಸೊಪ್ಪುಗಳು, ತರಕಾರಿಗಳು, ಹಣ್ಣುಗಳು ಮತ್ತು ಗಿಡಮೂಲಿಕೆಗಳಿಂದ ರುಚಿಕರವಾದ ಖಾದ್ಯವನ್ನು ತಯಾರಿಸುವಲ್ಲಿ ನಮ್ಮಗಳಿಗೆ ಯಾರು ಸರಿಸಾಟಿಯೇ ಇಲ್ಲ. ವಿವಿಧ ರೀತಿಯ ಕಷಾಯ ತಯಾರಿಸಿದಂತೆ ಕಾಫಿ ಬೀಜಗಳಿಂದ ತಯಾರಿಸಿದ ಬಿಸಿ ಬಿಸಿ ಪಾನೀಯಕ್ಕೆ ಹಾಲು ಮತ್ತು ಸ್ಥಳಿಯವಾಗಿ ಬೆಳೆದ ಕಬ್ಬಿನಿಂದ ತೆಗೆದ ಬೆಲ್ಲವನ್ನು ಸೇರಿಸಿ, ಸೋಸಿ ಒಂದು ವಿಭಿನ್ನ ಮಾದರಿಯ ರುಚಿಕರ ಕಾಫಿಯನ್ನು ತಯಾರಿಸಿದ ಹೆಗ್ಗಳಿಕೆ ನಮ್ಮ ಮಲೆನಾಡಿಗರಿಗೆ ಸಲ್ಲ ಬೇಕು.
ಇಕ್ಕೇರಿ ನಾಯಕರಲ್ಲಿ ಶಿವಪ್ಪನಾಯಕರ (1645 – 1660) ಮಾತೆ ಬೇರೆ, ಇವರು ಮಹಾನ್ ವೀರರು ಮತ್ತು ಶೂರರು ಜೊತೆಗೆ ಕೋಟೆಯ ವಿನ್ಯಾಸ ಮತ್ತು ಯುದ್ಧ ನೀತಿಯಲ್ಲಿ ಎತ್ತಿದ ಕೈ, ಆದರೆ ಇದರ ಹೊರತಾಗಿ ಇನ್ನೊಂದು ಮುಖವನ್ನು ಹೊಂದಿದ್ದ ಶಿವಪ್ಪನಾಯಕರು ತಾವು ವಿನ್ಯಾಸ ಮಾಡಿ ಕಟ್ಟಿದ ಆ ಮಹಾನಗರ “ಬಿದನೂರಿನಲ್ಲಿ” ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸಲು ಒಂದು ಪೂರ್ಣ ಪ್ರಮಾಣದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುತ್ತಾರೆ. ಶಿವಪ್ಪನಾಯಕನಿಗೆ ಕೃಷಿ ಚಟುವಟಿಕೆ ಬಗ್ಗೆ ಹೆಚ್ಚಾದ ಆಸಕ್ತಿ ಇದ್ದು, ಅದರಲ್ಲಿ ಹೊಸ ಹೊಸ ತಂತ್ರಜ್ಞಾನ ಮತ್ತು ಭತ್ತದ ಇಳುವರಿಯನ್ನು ಜಾಸ್ತಿ ಮಾಡಲು, ರಾಜ್ಯದ ವತಿಯಿಂದ ಬೇರೆ ಬೇರೆ ಜಾಗದಲ್ಲಿ ತೋಟ ಮತ್ತು ಗದ್ದೆಗಳ ನಿರ್ವಹಣೆ ಮಾಡಲಾಗುತ್ತಿತ್ತು. ಇಂತಹ ಒಂದು ತೋಟದಲ್ಲಿ ಸಣ್ಣ ಅರಮನೆ ನಿರ್ಮಿಸಿ ಅಲ್ಲಿ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಅದರಲ್ಲಿ ಪ್ರತಿ ವರ್ಷ ಉಪಯೋಗಿಸುವ ಬೀಜದ ಪ್ರಮಾಣ, ಕೃಷಿಗೆ ತಗಲುವ ವೆಚ್ಚ ಮತ್ತು ಫಸಲಿನ ಇಳುವರಿಯ ಪ್ರಮಾಣ ಮತ್ತು ಗುಣಮಟ್ಟವನ್ನು ದಾಖಲಿಸಲಾಗುತ್ತಿತ್ತು. ಶಿವಪ್ಪನಾಯಕನ ಈ ಕೃಷಿ ಸಂಶೋಧನಾ ಕೇಂದ್ರ ಮತ್ತು ತೋಟದ ಮನೆಯ ಹೆಸರೇ “ಕುಂಬತ್ತಿ ಮಹಲ್”. ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕಾನನ್ 24 ಮಾರ್ಚ್ 1801ರಂದು ನಗರದ ಫತೇಹ್ ಪೇಟೆ ಹತ್ತಿರ ಇರುವ ಇಕ್ಕೇರಿ ರಾಜರ ತೋಟದ ಮನೆಗೆ ಭೇಟಿ ನೀಡಿ ಅಲ್ಲಿರುವ ವಾಸ್ತುಸ್ಥಿತಿಯ ಬಗ್ಗೆ ದಾಖಲೆ ಮಾಡಿದ್ದಾರೆ. ಅದೇ ರೀತಿ ಮೇ 1807 ರಲ್ಲಿ ತಯಾರಿಸಿದ ನಾಲ್ಕು × ನಾಲ್ಕು ಅಡಿಯ ನಗರ ನಕ್ಷೆಯಲ್ಲಿ, ಕುಂಬತ್ತಿ ಮಹಲ್ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ.
ಶಿವಪ್ಪನಾಯಕರ ಕಾಲದಲ್ಲಿ ಕುಂಭತ್ತಿ ಮಹಲ್ ಪರಿಸರದಲ್ಲಿ ಇದ್ದ ಗುಡ್ಡದ ಇಳಿಜಾರಿನಲ್ಲಿ ಪಶ್ಚಿಮ ಘಟ್ಟದ ಸ್ಥಳೀಯ ಮರಗಳ ನೆರಳಿನಲ್ಲಿ ಬೆಳದ ಕಾಫಿ, ಅರೇಬಿಕ್ ಕಾಫಿಗಿಂತ ವಿಭಿನ್ನವಾಗಿತ್ತು. ಅಂದು ಕುಂಭತ್ತಿ ಮಹಲ್ ಸಂಶೋಧನಾ ಕೇಂದ್ರದ ಪರಿಸರದಲ್ಲಿ ಯಶಸ್ಸು ಕಂಡ ಕಾಫಿಯ ತೋಟವನ್ನು ಪಶ್ಚಿಮ ಘಟ್ಟದ ಬೇರೆ ಬೇರೆ ಪ್ರದೇಶಗಳಲ್ಲಿ ವಿಸ್ತರಿಸಲಾಗುತ್ತದೆ. ಆದರೆ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಂದು ಅಡಿಕೆ ಮತ್ತು ಕಾಫಿಯ ತೋಟವನ್ನು ನಮ್ಮ ಮಲೆನಾಡಿನಲ್ಲಿ ಇಂದಿನ ರೀತಿಯಲ್ಲಿ ಮಿತಿಮೀರಿ ಬೆಳೆಸಿದ ರೀತಿಯಲ್ಲಿ ಬೆಳೆಸಲ್ಲಿಲ್ಲ. ಅಂದು ಶಿವಪ್ಪನಾಯಕರು ಬೆಳಸಿದ ಕಾಫಿಯ ತೋಟದ ಪ್ರದೇಶವನ್ನು ಇಂದಿಗೂ ಸಹಾ ಜನರು “ಕಾಫಿ ಖಾನ್” (ಖಾನ್ ಎಂದರೆ ಕಾಡು) ಎಂದು ಕರೆಯುತ್ತಾರೆ, ಆ ಕಾಫಿ ಖಾನ್ ಗುಡ್ಡದ ಮೇಲ್ಬಾಗದಲ್ಲಿ ಇರುವ ಕೆರೆಗೆ ಕಾಫಿ ಖಾನ್ ಕೆರೆ ಎಂದು ಕರೆಯಲ್ಪಡುತ್ತಿದ್ದು, ಇನ್ನೂ ಇಕ್ಕೇರಿ ರಾಜ್ಯದ ಇಂದಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆ ಈ “ಕಾಫಿ ಖಾನ್” ಹೆಸರಿನ ಪ್ರದೇಶಗಳು ಅಂದಿನ ದಿನಗಳಲ್ಲಿ ಮೊಟ್ಟಮೊದಲ ಕಾಫಿ ಕ್ರಾಂತಿಗೆ ನಾಂದಿ ಹಾಡಿತು. ಇಕ್ಕೇರಿ ಅರಸು ಮನೆತನದ ಜೊತೆಗೆ ರಕ್ತ ಸಂಭಂದ ಹೊಂದಿದ್ದ ಹಾಲೇರಿ ರಾಜಮನೆತನದವರು ಆಳುತ್ತಿದ್ದ ಕೊಡಿಗಿನಲ್ಲು ಸ್ವಾಭಾವಿಕವಾಗಿ ಕಾಫಿಯ ತೋಟಗಳು ತಲೆ ಎತ್ತಿದವು.
17ನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಡಚ್ಚರು ಜಾವಾ, ಇಂಡೋನೇಷ್ಯಾ, ಸಿಲೋನ್ ಮತ್ತು ಭಾರತದ ಮಲಬಾರ್ ಪ್ರದೇಶಗಳಲ್ಲಿ ಕಾಫಿಯ ತೋಟಗಳನ್ನು ಸ್ಥಾಪಿಸುತ್ತಾರೆ. 19ನೇ ಶತಮಾನದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ 1831 ರಿಂದ 1881ರ ವರೆಗೆ ಚಾಲ್ತಿಯಲ್ಲಿದ್ದ ಕಮಿಷನರ್ ರೂಲ್ ಸಮಯದಲ್ಲಿ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು 1834 ನಂತರದಲ್ಲಿ ಕೊಡಗಿನಲ್ಲಿ ಹಲವಾರು ಯುರೋಪಿಯನ್ನರು ನಮ್ಮ ನೈಸರ್ಗಿಕ ಭರಿತ ಸಾವಿರಾರು ಹೆಕ್ಟೇರ್ ಕಾಡನ್ನು ಕಡಿದು ಕಾಫಿ ಬೆಳೆಯಲು ಪ್ರಾರಂಭಿಸುತ್ತಾರೆ. ಪ್ಯಾರಿ ಅ್ಯಂಡ ಕಂಪನಿಯ (Parry & Company) ಏಜೆಂಟ್ ಆಗಿದ್ದ ಎಚ್. ಜೊಲಿ (JH Jolly) ಚಿಕ್ಕಮಗಳೂರಿನಲ್ಲಿ ಬೆಳೆಯುವ ಕಾಫಿಯನ್ನು ಖರೀದಿಸಲು 1823ರಲ್ಲಿ ಮೈಸೂರು ಮಹಾರಾಜರ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕುತ್ತಾನೆ. ಇದರ ನಂತರ ಥೋಮಸ್ ಕ್ಯಾನಾನ್ (Thomas Cannon Mylemoney) 1830ರಲ್ಲಿ ಅಂದಿನ ಕಡೂರು ಜಿಲ್ಲೆಯಲ್ಲಿ (ಇಂದಿನ ಚಿಕ್ಕಮಗಳೂರು) ದೊಡ್ಡ ಪ್ರಮಾಣದಲ್ಲಿ ಕಾಫಿ ಬೆಳೆಯಲು ಶುರು ಮಾಡುತ್ತಾನೆ.
ನೋಡು ನೋಡುತ್ತಲೆ, ಮಿಡಲ್ಟನ್ (A Middleton), ಫಾಸ್ಟರ್ (RO Foster), ಬ್ರೂಕ್ ಮೋಕೆಟ್ (Brooke Mocket), ವಿಲಿಯಮ್ಸ್ (RW Williams), ಚೆಸ್ಟರ್ (CK Chester), ರಾಡ್ಕ್ಲಿಫ್ (Radcliff) ಮತ್ತು ಡೆಂಟನ್ (Denton) ಇವರುಗಳು ನಮ್ಮ ಪಶ್ಚಿಮ ಘಟ್ಟದ ಕಾಡನ್ನು ಕಡಿದು ಕಾಫಿ ಪ್ಲಾಂಟೇಷನ್ ವ್ಯವಸಾಯವನ್ನು ಪ್ರಾರಂಭಿಸುತ್ತಾರೆ. ಅಂದಿನ ಕಡೂರು (ಇಂದಿನ ಚಿಕ್ಕಮಗಳೂರು) ಮತ್ತು ಹಾಸನ್ ಜಿಲ್ಲೆಯಲ್ಲಿ ಆಂಗ್ಲರು ಪಶ್ಚಿಮ ಘಟ್ಟದ ಸಾವಿರಾರು ಎಕರೆ ಮಳೆಕಾಡನ್ನು ಕಡಿದು ಅದರಲ್ಲಿ ಮನಸೋ ಇಚ್ಚೆ ಕಾಫಿ ಎಸ್ಟೇಟ್ಗಳನ್ನು ಸ್ಥಾಪಿಸಿದರು. ಅಂದು ಕಡೂರು ಮತ್ತು ಹಾಸನದಲ್ಲಿ ಪ್ರಾರಂಭಿಸಿದ ಕೆಲವು ಕಾಫಿ ಎಸ್ಟೇಟ್ಗಳು ಮತ್ತು ಅದರ ಆಂಗ್ಲ ಮಾಲೀಕರ ಹೆಸರುಗಳು ಈ ಕೆಳಕಂಡಂತೆ ಇರುತ್ತದೆ:-
Angadi (W.E Tweedie), Archully (A. Thomson), Balur (Thomas Cannon), Barchinhulla (R. H. Elliot), Barguai – Mutsaugor – Eacheryully Estate (R. A. Anderson), Barekody (Ross Porter), Bettamane (M. J. Woodbridge), Ooghulli (Messers M. J. Woodbridge and S. H. Dennis), Ootsey (Woodbridge and E. M. Davidson), Biccode (C. Lake), Holalu Estate (C. Lake), Bupponji (J. R. Errington), Cadamaney (J. S. Middleton), Checkili (Messers Bunny & Co Ltd), Chetenhalli (H. M. Nor they & E. S. Broughton), Gooty Khan formerly called Yester (H. M. Northey), Chininhally (W. H. F. Lincoln), Chundrapur (Messers J. G. And F. M. Hamilton), Dod Lackoonda (Messers J. G. H. And J. R. Crawford), Baithney – Moosenkhan (C. K. Pittock), Cubbonhully (Pittock), Dhaitapore (Brooke Mockett’s), Hervatti (Captain W. L. Crawford and H. V. Crawford), Hogudday (J. G. H. Crawford), Mullagahully – Arnegalhully (Crawford), Muthigee – Igloor – Kitegelale – Kul Tota (Mrs James Hunter), Ossoor (Captain W. L. Crawford), Bellagode – Kendynmunny (Captain W. L. Crawford), Soondhully – Lakoondah ( S. Sladden), Tippapur – Appajis, Ubban (Brooke), Handi (H. Godwin Bower), Hooli Hundloo (Percy Hunt), Honeyvale (Messers Morgan), Gubgull (F. I. Morgan), Hoscottay (Sir Basil Scott and Sir Lindsay Wood), Isabel – Netrakul (Messers R and C. S. Crawford), Karradi Betta (Captain Hunt), Caugnoor (Captain Hunt), Kelganni (L. P. Kent), Kelagur – Abragoodigay – Goomenkhan (Messers Bunny & Co Ltd), Kesimburthy (G. R. Oliver), Kirahulli (H. F. Anderson), Kothencode, Kulhutty Estate (Mrs W. St. Claire Johnson, Mrs S. J. Wilson and Mr. D. H. Luxa), Kummergode (Col H. B. Sanderson), Kutchen Huckloo (Messers E. C. And L. P. Kent), Lingapur (W. F. Schofield), Mavinkere (W. A. Lee), Moodsoosie (E. E. Brought on), Murkull (F. Urquhart) and Mylemony (H. Allardyce).
ಈ ಮೇಲ್ಕಂಡ ಅದೆಷ್ಟೋ ಕಾಫಿ ತೋಟಗಳು ತಮ್ಮ ಮೂಲ ಹೆಸರು ಉಳಿಸಿಕೊಂಡು ಈಗ ಆಂಗ್ಲರ ಬದಲಿಗೆ ಸ್ಥಳೀಯರ ಪಾಲಾಗಿದೆ. ಇವುಗಳಲ್ಲಿ ಕೆಲವು ಕಾಫಿ ಎಸ್ಟೇಟ್ಗಳ ನೂರಾರು ವರ್ಷಗಳ ಹಿಂದಿನ ಕಪ್ಪು ಬಿಳುಪು ಫೋಟೋಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಇನ್ನೂ ನಮ್ಮ ಕೊಡಗಿನಲ್ಲಿ ಸಹಾ 1854ರಲ್ಲಿ ಶುರುವಾದ ಕಾಫಿ ಪರ್ವ ಕೇವಲ 50 ವರ್ಷಗಳಲ್ಲಿ ಕೊಡಗಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುತ್ತದೆ.
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
Saakshatv Naavu kelada charitre episode5
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ