ಭೂಕಬಳಿಕೆ ಆರೋಪ ಕೇಳಿಬಂದ ಸಚಿವನ ಖಾತೆ ಕಿತ್ತುಕೊಂಡ ಕೆಸಿಆರ್
ಹೈದರಾಬಾದ್ : ಬಲವಂತವಾಗಿ ರೈತರ ಜಮೀನುಗಳನ್ನು ಕಿತ್ತುಕೊಂಡಿದ್ದಾರೆ ಎಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ಸಂಪುಟ ಸಚಿವನ ಖಾತೆಗಳನ್ನು ಕಿತ್ತುಕೊಂಡು ತನಿಖೆಗೆ ಆದೇಶಿಸಿದ್ದಾರೆ.
ಸಚಿವ ಎಟೆಲಾ ರಾಜೆಂದರ್ ಅವರ ವಿರುದ್ಧ ಭೂಕಬಳಿಕೆ ಆರೋಪಗಳು ಕೇಳಿಬಂದಿವೆ. ಇವರು ತಮ್ಮ ಒಡೆತನದ ಸುಮಾರು 100 ಎಕೆರೆ ಜಮೀನನ್ನು ಬಲವಂತವಾಗಿ ಬಳಳಿಸಿದ್ದಾರೆ ಎಂದು ಮೇಡಕ್ ಜಿಲ್ಲಾ ರೈತರು ಆರೋಪಿಸಿ, ಕೆಸಿಆರ್ ಗೆ ದೂರು ಸಲ್ಲಿಸಿದ್ದರು.
ಇದನ್ನ ಗಂಭೀರವಾಗಿ ತೆಗೆದುಕೊಂಡಿರುವ ಕೆಸಿಆರ್, ಸಚಿವರ ಬಳಿಕ ಇದ್ದ ಖಾತೆಗಳನ್ನು ಕಿತ್ತುಕೊಂಡು ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಸೋಮೇಶ ಕುಮಾರ ಅವರಿಗೆ ಆದೇಶ ನೀಡಿದ್ದಾರೆ. ಜೊತೆಗೆ ಆರೋಪಗಳ ಸತ್ಯಾಸತ್ಯತೆಯ ಕುರಿತು ತನಿಖೆ ನಡೆಸುವಂತೆ ವಿಚಕ್ಷಣಾ ದಳ ಡಿಜಿಪಿ ಪೂರ್ಣಚಂದ್ರ ರಾವ್ ಅವರಿಗೂ ಕೆಸಿಆರ್ ಸೂಚನೆ ನೀಡಿದ್ದಾರೆ.
ಈ ಮಧ್ಯೆ ತಮ್ಮ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ಎಟೆಲಾ ರಾಜೆಂದರ್ ವಾದಿಸಿದ್ದು, ತನಿಖೆಗೆ ಸಿದ್ಧ ಎಂದಿದ್ದಾರೆ.